(ನ್ಯೂಸ್ ಕಡಬ) newskadaba.com, ಜು.25: ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿ ಪಡೆಯಲು ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿಯನ್ನು ಪ್ರಸ್ತುತ ಇರುವ ₹1.20 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಲು ಆಡಳಿತಾತ್ಮಕ ಸುಧಾರಣೆ ಆಯೋಗದ ಶಿಫಾರಸಿನಂತೆ ಚಿಂತನೆ ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ತೆರಿಗೆ ಪಾವತಿ ಸೇರಿದಂತೆ ವಿವಿಧ ಕಾರಣಗಳಿಂದ ಪಡಿತರ ತಡೆಹಿಡಿಯಲಾದ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ.ಬಿಪಿಎಲ್ ಕುಟುಂಬದ ಮುಖ್ಯಸ್ಥೆ ನಿಧನರಾದರೆ, ಅವರ ಸ್ಥಾನಕ್ಕೆ ಸೊಸೆ ಅಥವಾ ಮಗಳ ಹೆಸರು ಸೇರಿಸುವ ಪ್ರಕ್ರಿಯೆಯನ್ನು 3 ತಿಂಗಳಿಂದ 1 ತಿಂಗಳಿಗೆ ಕಡಿತಗೊಳಿಸಲಾಗಿದೆ.ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ತೆರೆಯದಿದ್ದರೆ ಸಾರ್ವಜನಿಕರು 1967 ಸಹಾಯವಾಣಿಗೆ ದೂರು ನೀಡಬಹುದು.
‘ಅನ್ನಭಾಗ್ಯ’ ಯೋಜನೆಯಡಿ ಸುಮಾರು ₹6,000 ಕೋಟಿ ವೆಚ್ಚದ ‘ಇಂದಿರಾ ಕಿಟ್’ ವಿತರಣೆಗೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇದು ಸಾಧ್ಯವಾಗದಿದ್ದರೆ 5 ಕೆ.ಜಿ. ಪಡಿತರ ಮೊತ್ತದ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತದೆ.
ದಕ್ಷಿಣ ಕರ್ನಾಟಕ ಭಾಗದಲ್ಲಿ: 7 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ರಾಗಿ, ಉತ್ತರ ಕರ್ನಾಟಕ ಭಾಗದಲ್ಲಿ: 8 ಕೆ.ಜಿ ಅಕ್ಕಿ ಮತ್ತು 2 ಕೆ.ಜಿ ಜೋಳ.ಪಡಿತರ ಅಕ್ಕಿ ಕಾಳಸಂತೆ ಮಾರಾಟ ಮತ್ತು ತೂಕ ವಂಚನೆ ತಡೆಯಲು ಗೋದಾಮುಗಳಿಗೆ ಸಿಸಿಟಿವಿ, ವಾಹನಗಳಿಗೆ ಜಿಪಿಎಸ್ ಅಳವಡಿಸಿ, ಕೇಂದ್ರ ಕಚೇರಿಯಲ್ಲಿ ಕಮಾಂಡ್ ಕಂಟ್ರೋಲ್ ರೂಂ ಸ್ಥಾಪಿಸಲಾಗುತ್ತಿದೆ.









