ಪಡುಬಿದ್ರಿ: ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಮೃತದೇಹ ಪತ್ತೆ ► ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

(ನ್ಯೂಸ್ ಕಡಬ) newskadaba.com
ಪಡುಬಿದ್ರೆ, ಮೇ.30. ಮಂಗಳವಾರ ಸುರಿದ ಭಾರೀ ಮಳೆಗೆ ಕೃತಕ ನೆರೆ ನೀರಿನಲ್ಲಿ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಬುಧವಾರದಂದು 100 ಮೀಟರ್ ದೂರದಲ್ಲಿ ಪತ್ತೆಯಾಗಿದೆ.

ಮೃತ ಬಾಲಕಿಯನ್ನು ಪಾದೆಬೆಟ್ಟುವಿನ ಉಮೇಶ್ ಆಚಾರ್ಯ ಮತ್ತು ಆಶಾ ದಂಪತಿಯ ಪುತ್ರಿ, ಪಡುಬಿದ್ರೆಯ ಎಸ್‌ಬಿವಿಪಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ನಿಧಿ ಆಚಾರ್ಯ (9) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆಯಿಂದಲೇ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಶಾಲೆ ಬಿಟ್ಟಿದ್ದು, ನಿಧಿ ತನ್ನ ಸಹೋದರಿ ನಿಶಾಳೊಂದಿಗೆ ಸೈಕಲ್‌ನಲ್ಲಿ ಮನೆಗೆ ತೆರಳುತಿದ್ದಾಗ ಎರ್ಮಾಳು ತೆಂಕ ಪಾದೆಬೆಟ್ಟು ಆಲಡೆಯ ಬಳಿಯ ಪಟ್ಲ ಕಿರುಸೇತುವೆ ದಾಟುತಿದ್ದಾಗ ಸೇತುವೆಯ ಮೇಲೆ ನೀರು ಹರಿದು ಇವರಿಬ್ಬರು‌ ನೀರು ಪಾಲಾಗಿದ್ದರು. ಈ ವೇಳೆ ನಿಶಾ ಅಲ್ಲಿಯೇ ಕೈಗೆ ಸಿಕ್ಕಿದ ಹುಲ್ಲು ಕಡ್ಡಿಗಳನ್ನು ಹಿಡಿದುಕೊಂಡು ಬೊಬ್ಬೆ ಹಾಕುತಿದ್ದಾಗ ಬೊಬ್ಬೆ ಕೇಳಿ ಸ್ಥಳೀಯರು ಬಂದು ಆಕೆಯನ್ನು ರಕ್ಷಿಸಿದ್ದರು.

ಇಂದು ಎನ್‍ಡಿಆರ್ ಎಫ್ ಅಧಿಕಾರಿಗಳು ಬಂದು ಶೋಧ ಕಾರ್ಯ ನಡೆಸಿದ್ದು, ಘಟನಾ ಸ್ಥಳದಿಂದ 100 ಮೀ ದೂರದಲ್ಲಿ ನಿಧಿ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದು ಸುಮಾರು 16 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಬಾಲಕಿಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಾಲ್ಕು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾಲಕಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

error: Content is protected !!

Join the Group

Join WhatsApp Group