(ನ್ಯೂಸ್ ಕಡಬ) newskadaba.com, ಜು.14 : ಮಂಗಳೂರಿನ ಕೊಡ್ಯಾಲಬೈಲ್ನಲ್ಲಿರುವ ಜಿಲ್ಲಾ ಕಾರಾಗೃಹದ ಹಾಲಿ ಇರುವ 15 ಅಡಿ ಎತ್ತರದ ಆವರಣ ಗೋಡೆಯ ಮೇಲೆ ಹೆಚ್ಚುವರಿಯಾಗಿ 12 ಅಡಿ ಎತ್ತರದ ತಂತಿ ಬೇಲಿ ಅಳವಡಿಸುವ ಕಾಮಗಾರಿ ಆರಂಭವಾಗಿದೆ.
ಕಾರಾಗೃಹ ಇಲಾಖೆಯ ₹50 ಲಕ್ಷ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ (PWD) ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.ಹೊರಗಿನ ರಸ್ತೆಯಿಂದ ಜೈಲಿನೊಳಗೆ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಕಲ್ಲು ಕಟ್ಟಿ ಮೊಬೈಲ್ ಹಾಗೂ ಗಾಂಜಾ ಎಸೆಯುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ತಡೆಯಲು ಈ ಬಿಗಿ ಕ್ರಮ ಕೈಗೊಳ್ಳಲಾಗಿದೆ.
ಹೊಸದಾಗಿ ಅಳವಡಿಸುತ್ತಿರುವ ತಂತಿ ಜಾಲರಿ ಅತ್ಯಂತ ಕಿರಿದಾಗಿದ್ದು, ಸಣ್ಣ ಕಲ್ಲು ಕೂಡ ಒಳಗೆ ಹೋಗದಂತೆ ವಿನ್ಯಾಸಗೊಳಿಸಲಾಗಿದೆ ಎಂದು ಜೈಲು ಅಧೀಕ್ಷಕ ಶರಣ ಬಸಪ್ಪ ತಿಳಿಸಿದ್ದಾರೆ.ಜೈಲಿನ ಹೊರ ಆವರಣದ ಭದ್ರತೆಯನ್ನು ಕೆ.ಎಸ್.ಐ.ಎಸ್.ಎಫ್ ಸಿಬ್ಬಂದಿ ನೋಡಿಕೊಳ್ಳುತ್ತಿದ್ದು, ಪ್ರವೇಶಿಸುವ ಪ್ರತಿಯೊಬ್ಬರ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.
210 ಕೈದಿಗಳ ಸಾಮರ್ಥ್ಯವಿರುವ ಜೈಲಿನಲ್ಲಿ ಪ್ರಸ್ತುತ 369 ಕೈದಿಗಳು ಇದ್ದಾರೆ. ಇವರಲ್ಲಿ ಶೇ. 50 ರಿಂದ 60 ರಷ್ಟು ಮಂದಿ ಮಾದಕ ವ್ಯಸನಿಗಳಾಗಿದ್ದಾರೆ. ಜೈಲಿನಲ್ಲಿ ಸ್ಥಳಾವಕಾಶದ ಕೊರತೆ ಇರುವ ಹಿನ್ನೆಲೆಯಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಕೈದಿಗಳನ್ನು ಶಿವಮೊಗ್ಗ ಸೇರಿದಂತೆ ಇತರ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ.









