ನೀಲೇಶ್ವರ: ಕಂಬ ದುರಸ್ತಿ ಮಾಡುವಾಗ ವಿದ್ಯುತ್ ತಗುಲಿ ಕೆಎಸ್‌ಇಬಿ ಲೈನ್‌ಮ್ಯಾನ್ ಮೃತ್ಯು

(ನ್ಯೂಸ್‌ ಕಡಬ) newskadaba.com,  ಜು.10: ನೀಲೇಶ್ವರ ಬಳಿಯ ಮಡಿಕೈನಲ್ಲಿ ತಾಂತ್ರಿಕ ದೋಷ ಸರಿಪಡಿಸಲು ವಿದ್ಯುತ್ ಕಂಬ ಹತ್ತಿದ್ದ ಲೈನ್‌ಮ್ಯಾನ್ ಓರ್ವರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.ಮೃತರನ್ನು ಪುಲ್ಲೂರು ಮಧುರಂಬಾಡಿ ನಿವಾಸಿ ಭರತನ್ (52) ಎಂದು ಗುರುತಿಸಲಾಗಿದೆ. ಇವರು ಕೇರಳ ರಾಜ್ಯ ವಿದ್ಯುತ್ ಮಂಡಳಿಯ (ಕೆಎಸ್‌ಇಬಿ) ಮಾವುಂಗಲ್ ವಿಭಾಗದ ಉದ್ಯೋಗಿಯಾಗಿದ್ದರು.

ಮಡಿಕೈ ಕಣಿಚ್ಚಿರಾ ಸೇತುವೆಯ ಬಳಿ ವಿದ್ಯುತ್ ತಂತಿಯ ದೋಷ ಸರಿಪಡಿಸುವಾಗ ಅನಿರೀಕ್ಷಿತವಾಗಿ ವಿದ್ಯುತ್ ಸ್ಪರ್ಶಿಸಿದೆ. ಅವರು ಸೊಂಟಕ್ಕೆ ಸುರಕ್ಷತಾ ಬೆಲ್ಟ್ ಧರಿಸಿದ್ದರಿಂದ, ಮೃತದೇಹವು ಕಂಬದ ಮೇಲೆಯೇ ನೇತಾಡುತ್ತಿತ್ತು.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಮೃತದೇಹವನ್ನು ಕೆಳಗಿಳಿಸಿದ್ದು, ಸದ್ಯ ದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

Scroll to Top