(ನ್ಯೂಸ್ ಕಡಬ) newskadaba.com, ಜೂ.17: ಜೂನ್ 21 ರಂದು ನಡೆಯಲಿರುವ ನೀಟ್-ಯುಜಿ (NEET-UG) ಮರುಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತರ ಪ್ರದೇಶ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ಬಸ್ ಪ್ರಯಾಣ ದರದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕೃತವಾಗಿ ಘೋಷಿಸಿದ್ದಾರೆ.
ಜೂನ್ 21 ರಂದು ನಡೆಯಲಿರುವ ಯೋಗ ದಿನಾಚರಣೆಯ ಪೂರ್ವಸಿದ್ಧತಾ ಪರಿಶೀಲನಾ ಸಭೆಯಲ್ಲಿ ಸಿಎಂ ಈ ನಿರ್ಧಾರ ಪ್ರಕಟಿಸಿದರು. ಈ ಬಾರಿ ‘ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ’ ಎಂಬ ಥೀಮ್ ಅಡಿಯಲ್ಲಿ ರಾಜ್ಯದ 57,000 ಗ್ರಾಮ ಪಂಚಾಯಿತಿ ಹಾಗೂ 762 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ.
ಜೂನ್ 26 ರಂದು ಆಚರಿಸಲಾಗುವ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. “ಮೊಹರಂ ಶೋಕಾಚರಣೆಯ ಸಂದರ್ಭವೇ ಹೊರತು, ಶಕ್ತಿ ಪ್ರದರ್ಶನದ ಸಮಯವಲ್ಲ” ಎಂದು ತಿಳಿಸಿರುವ ಸಿಎಂ, ಹಬ್ಬವನ್ನು ಶಿಸ್ತಿನಿಂದ ಆಚರಿಸಲು ಮತ್ತು ಜೋರಾಗಿ ಡಿಜೆ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲು ಆದೇಶಿಸಿದ್ದಾರೆ.









