(ನ್ಯೂಸ್ ಕಡಬ) newskadaba.com, ಜೂ. 12 ಕಳೆದ 26 ವರ್ಷಗಳ ಹಿಂದೆ ಧರ್ಮಸ್ಥಳದ ಅಶೋಕನಗರದಿಂದ ನಾಪತ್ತೆಯಾಗಿದ್ದ ಯುವಕನೊಬ್ಬ ಪವಾಡಸದೃಶ ರೀತಿಯಲ್ಲಿ ಮರಳಿ ಮನೆಗೆ ಬಂದಿದ್ದಾನೆ.2000ನೇ ಇಸವಿಯಲ್ಲಿ ತನ್ನ 19ನೇ ವಯಸ್ಸಿನಲ್ಲಿ ಸರ್ಕಸ್ ತಂಡದ ಜೊತೆ ಮಹಾರಾಷ್ಟ್ರಕ್ಕೆ ತೆರಳಿದ್ದ ಸತೀಶ್, ಕಾಲಕ್ರಮೇಣ ತನ್ನ ಊರು-ಕುಟುಂಬವನ್ನು ಮರೆತಿದ್ದನು.
ಮಹಾರಾಷ್ಟ್ರದಲ್ಲೇ ನೆಲೆಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ‘ಸಲೀಂ ಅಬ್ದುಲ್ ಅನ್ಸಾರಿ’ ಆಗಿದ್ದ ಆತ, ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿದ್ದಾನೆ. ಸದ್ಯ ಆತನಿಗೆ ಕನ್ನಡ, ತುಳು ಮರೆತುಹೋಗಿದ್ದು, ಕೇವಲ ಹಿಂದಿ ಮಾತ್ರ ಮಾತನಾಡುತ್ತಿದ್ದಾನೆ.
ಇತ್ತೀಚೆಗೆ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದಾಗ ಹಳೆಯ ಸರ್ಕಸ್ ಜಾಗ ನೋಡಿ ಬಾಲ್ಯದ ನೆನಪು ಮರುಕಳಿಸಿದೆ. ತಮ್ಮಂದಿರ ಹೆಸರು ನೆನಪಿಸಿಕೊಂಡು, ಸ್ಥಳೀಯರ ಸಹಾಯದಿಂದ ಕೊನೆಗೂ ತನ್ನ ಮನೆ ಪತ್ತೆಹಚ್ಚಿದ್ದಾನೆ.”ಸಾಯುವ ಮುನ್ನ ಮಗನನ್ನು ನೋಡಬೇಕು” ಎಂದು ಧರ್ಮಸ್ಥಳ, ಕಟೀಲು ಕ್ಷೇತ್ರಗಳಿಗೆ ಹರಕೆ ಹೊತ್ತಿದ್ದ ವೃದ್ಧ ತಾಯಿಯ ಪ್ರಾರ್ಥನೆ ಕೊನೆಗೂ ಫಲಿಸಿದೆ.









