(ನ್ಯೂಸ್ ಕಡಬ) newsksdaba.com ಮಂಗಳೂರು, ಜೂ. 06. ಕರ್ನಾಟಕ ಸರಕಾರವು ಸರಕಾರಿ ಸೌಲಭ್ಯಗಳು ಸುಲಭವಾಗಿ ಮತ್ತು ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರಿಗೆ ದೊರಕುವಂತೆ ಮಾಡುವ ಉದ್ದೇಶದಿಂದ ಸಕಾಲ ಯೋಜನೆಯನ್ನು ಜಾರಿಗೆ ತಂದಿದ್ದು, ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ಮತ್ತು (ತಿದ್ದುಪಡಿ) ಅಧಿನಿಯಮ 2014 ರ ಅನುಸಾರ, ಸಕಾಲ ನೋಂದಾಯಿತ ಸೇವೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪಡೆಯುವುದು ನಾಗರೀಕರ ಹಕ್ಕಾಗಿರುತ್ತದೆ.
ಸಕಾಲ ಕಾಯ್ದೆಯಡಿ, ಸೇವೆ ದೊರೆಯಲು ವಿಳಂಬವಾದಲ್ಲಿ ಅಥವಾ ತಿರಸ್ಕೃತಗೊಂಡಲ್ಲಿ ಅಥವಾ ಅಧಿಸೂಚಿತ ಸೇವೆಗೆ 15 ಸಂಖ್ಯೆಯ ಸಕಾಲ ಸ್ವೀಕೃತಿ ಸಂಖ್ಯೆ ನೀಡದಿದ್ದಲ್ಲಿ ಮೇಲೆ ಪ್ರಸ್ತಾಪಿತ ಮೂರು ಸಂದರ್ಭಗಳಲ್ಲಿ ನಾಗರೀಕರು ಸಕಾಲ ಕಾಯ್ದೆಯಡಿ, ಪ್ರಥಮ ಮೇಲ್ಮನವಿಯನ್ನು ಸಕ್ಷಮ ಅಧಿಕಾರಿಗಳಿಗೆ ಸಲ್ಲಿಸಲು ಅರ್ಹರಾಗಿರುತ್ತಾರೆ.
ಮೇಲ್ಮನವಿ ಸಲ್ಲಿಸುವ ಕಾರ್ಯವಿಧಾನ: ಕಾಲ್ ಸೆಂಟರ್ಗೆ (ಕರೆ ಸಂಖ್ಯೆ: 08044554455) ಕರೆ ಮಾಡುವ ಮೂಲಕ ಅಥವಾ ಸಕಾಲ ಮಿಷನ್ ವೆಬ್ಸೈಟ್ www.sakala.kar.nic.in ಮೂಲಕ ಮೇಲ್ಮನವಿ ಸಲ್ಲಿಸಬಹುದು. ಅಥವಾ ಸೇವೆಗೆ ನೋಂದಾಯಿಸಿಕೊಳ್ಳುವ ಸಂದರ್ಭದಲ್ಲಿ ನೀವು ನೀಡಿದ ಮೊಬೈಲ್ ಸಂಖ್ಯೆಗೆ, ಸೇವೆ ವಿಳಂಬವಾದರೆ ಅಥವಾ ತಿರಸ್ಕೃತಗೊಂಡರೆ ಸಕಾಲ ಮಿಷನ್ ಕಡೆಯಿಂದ ಟೆಕ್ಸ್ಟ್ ಲಿಂಕ್ ಕಳುಹಿಸಲಾಗುತ್ತದೆ. ನಾಗರೀಕರು ಲಿಂಕ್ ಮೂಲಕ ಮೇಲ್ಮನವಿ ಸಲ್ಲಿಸಬಹುದು.
ಅರ್ಜಿಯನ್ನು ಇತ್ಯರ್ಥಗೊಳಿಸುವಲ್ಲಿ ವಿಳಂಬವಾದಲ್ಲಿ, ಒಂದು ಅರ್ಜಿಗೆ ದಿನ ಒಂದಕ್ಕೆ 20 ರೂಪಾಯಿಗಳಂತೆ, ಗರಿಷ್ಠ 500 ರೂಪಾಯಿಗಳವರೆಗೆ ಪರಿಹಾರ ವೆಚ್ಚವನ್ನು ಪಡೆಯುವುದು ಮೇಲ್ಮನವಿದಾರರ ಹಕ್ಕಾಗಿರುತ್ತದೆ. ಯಾವುದೇ ಸಂದರ್ಭದಲ್ಲಿ ಪ್ರಥಮ ಮೇಲ್ಮನವಿಯ ತೀರ್ಪು ಬಗ್ಗೆ ಅಸಮಾಧಾನವಿದ್ದಲ್ಲಿ ಮೇಲೆ ನೀಡಿರುವ ಮೂರು ಅವಕಾಶಗಳನ್ನು ಬಳಸಿಕೊಂಡು, ದ್ವಿತೀಯ ಮೇಲ್ಮನವಿಯನ್ನು ಮೇಲ್ಮನವಿ ಪ್ರಾಧಿಕಾರಕ್ಕೆ ನಾಗರೀಕರು ಸಲ್ಲಿಸಲು ಅವಕಾಶವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.









