(ನ್ಯೂಸ್ ಕಡಬ) newskadaba.com ಜು. 24. ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ನಲ್ಲಿ ರಾತ್ರಿ ವೇಳೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷಗೊಂಡಿದ್ದು, ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಚಾರ್ಮಾಡಿ ಘಾಟ್ನ 11 ನೇ ಹೇರ್ ಪಿನ್ ತಿರುವಿನಲ್ಲಿ ರಸ್ತೆಬದಿಯ ತಡೆಗೋಡೆಯ ಮೇಲೆ ಕುಳಿತಿದ್ದ ಚಿರತೆ, ಬಳಿಕ ರಸ್ತೆಬದಿಯಲ್ಲಿ ಸಂಚರಿಸಿದೆ. ಈ ದೃಶ್ಯಗಳನ್ನು ಹಾದುಹೋಗುತ್ತಿದ್ದ ವಾಹನ ಸವಾರರು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.
ಕಳೆದ ತಿಂಗಳು ಈ ಸ್ಥಳದಿಂದ ಸುಮಾರು 6 ಕಿ.ಮೀ ದೂರದ ಘಾಟ್ ಭಾಗದಲ್ಲಿ ಹಾಗೂ ಕಳೆದ ವಾರ ಚಾರ್ಮಾಡಿ ಸಮೀಪದ ನೆರಿಯಾದ ರಬ್ಬರ್ ತೋಟದಲ್ಲಿಯೂ ಚಿರತೆ ಕಂಡುಬಂದಿತ್ತು.
ಘಾಟ್ ರಸ್ತೆಯಲ್ಲಿ ಪ್ರಯಾಣಿಸುವ ಸವಾರರು ಮತ್ತು ಚಾಲಕರು ಜಾಗರೂಕರಾಗಿರಬೇಕು ಹಾಗೂ ಕಾಡುಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆ ಅಥವಾ ಉಪಟಳ ನೀಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.









