(ನ್ಯೂಸ್ ಕಡಬ) com, ಎ.24: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೌಗೋಳಿಕ ಉದ್ವಿಗ್ನತೆ ಮತ್ತು ಜಾಗತಿಕ ವಿದ್ಯಮಾನಗಳ ಮಧ್ಯೆ ಇತ್ತ ಕರ್ನಾಟಕದಲ್ಲಿ ತೈಲ ಮತ್ತು ಅನಿಲ ಪೂರೈಕೆ ಸ್ಥಿರ, ಸದೃಢ ಮತ್ತು ಸಂಪೂರ್ಣ ನಿಯಂತ್ರಣದಲ್ಲಿದೆ. ರಾಜ್ಯವು ಸುಸಂಘಟಿತ ಪೆಟ್ರೋಲಿಯಂ ಮೂಲಸೌಕರ್ಯ ಜಾಲವನ್ನು ಹೊಂದಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ಮಾಹಿತಿ ನೀಡಿವೆ.
ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಹಾಗೂ ಭಾರತದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಗೇಲ್ ಇಂಡಿಯಾ ಜಂಟಿಯಾಗಿ ಮಾಧ್ಯಮಗೋಷ್ಠಿ ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಾರ್ಯಕಾರಿ ನಿರ್ದೇಶಕ ಸಿದ್ಧಾರ್ಥ ಅಗರವಾಲ್, ರಾಜ್ಯವು 15 ಎಂಎಂಟಿಪಿಎ (ಮೆಟ್ರಿಕ್ ಟನ್ಸ್ ಪರ್ ಆನಮ್) ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯದ ಸಂಸ್ಕರಣಾಗಾರವನ್ನು ಹೊಂದಿದ್ದು, ರಾಜ್ಯದ ಯಾವುದೇ ಭಾಗದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಕೊರತೆಯಿಲ್ಲ ಮತ್ತು ಎಲ್ಲಾ ರಿಟೇಲ್ ಮಾರಾಟ ಮಳಿಗೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಸಂಸ್ಕರಣಾಗಾರಗಳಿಂದ ಟರ್ಮಿನಲ್, ಡಿಪೋ ಹಾಗೂ ರಿಟೇಲ್ ಮಳಿಗೆಗಳವರೆಗೆ ಯಾವುದೇ ಅಡೆತಡೆಯಿಲ್ಲದೆ ತೈಲದ ಪೂರೈಕೆ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಗೃಹಬಳಕೆಯ ಎಲ್ಪಿಜಿಗೆ ಸಂಬಂಧಿಸಿದಂತೆ, ಕರ್ನಾಟಕವು ಸಮರ್ಪಕ ಮತ್ತು ನಿರಂತರ ಪೂರೈಕೆಯನ್ನು ಪಡೆಯುತ್ತಿದೆ. ಮಾರ್ಚ್ನಲ್ಲಿ ಆತಂಕ ಕಾರಣಕ್ಕೆ ಖರೀದಿ ಹಿನ್ನೆಲೆ ಬುಕ್ಕಿಂಗ್ಗಳು ದಿನಕ್ಕೆ 3.75 ಲಕ್ಷಕ್ಕೆ ಏರಿಕೆಯಾಗಿದ್ದು, ಇದರಿಂದ ವಿತರಣಾ ಅವಧಿ ಸ್ವಲ್ಪ ವಿಳಂಬವಾಗಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿ ಸ್ಥಿರವಾಗಿದೆ. ಇದೀಗ ದಿನಕ್ಕೆ 3.06 ಲಕ್ಷಕ್ಕೆ ಬುಕ್ಕಿಂಗ್ ಇಳಿಕೆಯಾಗಿದ್ದು, ವಿತರಣಾ ಅವಧಿಯೂ ಕ್ರಮೇಣ ಸುಧಾರಿಸಲಾಗುತ್ತಿದೆ ಎಂದರು.









