(ನ್ಯೂಸ್ ಕಡಬ) newsksdaba.com ಏ. 06. ತಿಂಗಳ ಮೊದಲ ಸ್ವಚ್ಛ ಶನಿವಾರ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯ 223 ಗ್ರಾಮ ಪಂಚಾಯತ್’ಗಳು ಭಾಗವಹಿಸಿ ರಸ್ತೆಯ ಇಕ್ಕೆಲಗಳಲ್ಲಿ ತುಂಬಿದ್ದ ಕಸಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿ ಬದಿ ಹಾಗೂ ಬಸ್ಸು ತಂಗುದಾಣ, ರಸ್ತೆ ಬದಿಯಲ್ಲಿ ಬಿದ್ದಿರುವ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಆಚರಿಸಲಾಯಿತು. ಪ್ರತಿ ತಿಂಗಳ ಮೊದಲ ಶನಿವಾರ ಸ್ವಚ್ಛ ಶನಿವಾರ ನಡೆಸುವ ಪ್ರಯುಕ್ತ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮದೊಂದಿಗೆ ಕಸ ಎಸೆದವರಿಗೆ ದಂಡ ವಿಧಿಸಲಾಯಿತು.
ಹರೇಕಳ ಗ್ರಾಮದ ಕರಾವಳಿ ಬೇಕರಿಗೆ 1000 ರೂ ಹಾಗೂ ಆಟೊ ಸರ್ವಿಸ್ ಗೆ 500 ರೂ. ದಂಡ ವಿಧಿಸಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ನೋಟಿಸ್ ನೀಡಿ ಬಟ್ಟೆ ಚೀಲ ವಿತರಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿ ರುದ್ರ ಭೂಮಿಗೆ ಹೋಗುವ ರಸ್ತೆ ಬದಿ, ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಜಿರೆ – ಬೆಳಾಲುಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೂರು ಭಾಗಗಳಲ್ಲಿ ಸ್ವಚ್ಛ ಶನಿವಾರ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ಶಿವಾಜಿ ನಗರ- ಕ್ರಾಸ್, ಕುವೆಂಪುನಗರ- ಕ್ರಾಸ್ ಹಾಗೂ ಓಡಲ ಎಂಬಲ್ಲಿ ರಸ್ತೆ ಬದಿಯ ಬ್ಲ್ಯಾಕ್ ಸ್ಪಾಟ್ ಗಳಲ್ಲಿರುವ ತ್ಯಾಜ್ಯವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಿ ಸ್ವಚ್ಛತೆ ಮಾಡಲಾಯಿತು.
ಸ್ವಚ್ಛ ಶನಿವಾರ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ/ಪಂಚಾಯತ್ ಸಿಬ್ಬಂದಿಗಳು, ಸಿ.ಎಚ್.ಒ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ದ್ವಿತೀಯ ದರ್ಜೆ. ಲೆಕ್ಕ ಸಹಾಯಕರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.









