(ನ್ಯೂಸ್ ಕಡಬ) newskadaba.com ಕಡಬ, ಜ.08. ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ನೀರಾಜೆಯ ಮಹಿಳೆಯೋರ್ವರು ತನ್ಬ ಮೂರೂವರೆ ವರ್ಷದ ಮಗುವಿನ ಜೊತೆ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಾಜೆ ನಿವಾಸಿ ಮುನೀರ್ ಎಂಬವರು ತನ್ನ ಪತ್ನಿ ನೇಹಾ(26) ಮತ್ತು ಪುತ್ರ ಮಹಮ್ಮದ್ ನಿಹಾಲ್ (4) ಜೊತೆ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದು, ಡಿಸೆಂಬರ್ 25 ರಂದು ಮುನೀರ್ ಓರ್ವನೇ ಮನೆಗೆ ಬಂದಾಗ ಹೆಂಡತಿ ಮತ್ತು ಮಗನ ಬಗ್ಗೆ ವಿಚಾರಿಸಲಾಗಿ, ಎರಡು ದಿನಗಳಲ್ಲಿ ಬರುವುದಾಗಿ ತಿಳಿಸಿರುತ್ತಾರೆ. ಮುಂದುವರಿದು ಡಿಸೆಂಬರ್ 30 ರಂದು ಮುನೀರ್ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಸ್ಥಳೀಯರು ರಕ್ಷಿಸಿದ್ದಾರೆ ಎನ್ನಲಾಗಿದೆ. ಜನವರಿ 3 ರಂದು ಮುನೀರ್ ಪುನಃ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ನೇಹಾ ಹಾಗೂ ನಿಹಾಲ್ ದೂರವಾಣಿ ಕರೆಗೂ ಸಿಗದೆ, ಸಂಬಂಧಿಕರ ಮನೆಯಲ್ಲೂ ಇರದೆ ನಾಪತ್ತೆಯಾಗಿರುವುದಾಗಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












