(ನ್ಯೂಸ್ ಕಡಬ) newskadaba.com, ಜ.05 ಸಕಲೇಶಪುರ : ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ವಿಭಾಗದ 55 ಕಿ.ಮೀ. ರೈಲು ಮಾರ್ಗದ ವಿದ್ಯುದೀಕರಣ ಕಾರ್ಯ ಪೂರ್ಣಗೊಂಡಿದ್ದು, ರೈಲುಗಳ ಸಂಖ್ಯೆ ಹೆಚ್ಚಾಗುವುದರಿಂದ ಪ್ರಯಾಣಿಕರು ಹಾಗೂ ವ್ಯಾಪಾರ ವಹಿವಾಟು, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂಬ ನಿರೀಕ್ಷೆ ಮೂಡಿದೆ.
ಈ ಭಾಗದ ಜನರ ದೀರ್ಘಕಾಲದ ರೈಲ್ವೆ ಮೂಲಸೌಕರ್ಯದ ಬೇಡಿಕೆ ಕೊನೆಗೂ ಈಡೇರಿದಂತಾಗಿದ್ದು, ಪ್ರಸ್ತುತ 10 ರೈಲುಗಳು ಸಂಚರಿಸುತ್ತಿದೆ. ಈಗ ರೈಲುಗಳ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗುವುದಲ್ಲದೆ ವ್ಯಾಪಾರಸ್ಥರ ಆರ್ಥಿಕ ಚಟುವಟಿಕೆಗೆ ಸಹಕಾರಿಯಾಗಲಿದೆ. ಅಲ್ಲದೆ ಪ್ರವಾಸಿ ತಾಣಗಳಿಗೂ ಹೆಚ್ಚಿನ ಜನರು ಆಗಮಿಸಲಿದ್ದು ಅಭಿವೃದ್ಧಿಗೆ ಕಾರಣವಾಗಲಿದೆ ಎಂಬ ಆಶಯ ವ್ಯಕ್ತವಾಗಿದೆ.
ಸರಕು ಸಾಗಣೆಗೆ ಅನುಕೂಲ:
ರೈಲು ಮಾರ್ಗ ವಿದ್ಯುತೀಕರಣ ಬಳಿಕ ಮಂಗಳೂರಿಗೆ ಹೆಚ್ಚುವರಿ ನಾಲ್ಕು ಸರಕು ಸಾಗಣೆ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ಸದ್ಯ ಸಕಲೇಶಪುರ ತಾಲೂಕಿನಲ್ಲಿ ತಾಲೂಕು ಕೇಂದ್ರ ಬಿಟ್ಟರೆ ಪಶ್ಚಿಮ ಘಟ್ಟ ಪ್ರದೇಶದ ಗ್ರಾಮೀಣ ಭಾಗದಲ್ಲಿರೈಲು ಸಂಚಾರವಿಲ್ಲ. ಬಹುತೇಕ ಎಲ್ಲಾ ವ್ಯಾಪಾರ ವಹಿವಾಟು ರಸ್ತೆ ಮಾರ್ಗದ ಮೂಲಕವೇ ನಡೆಯುತ್ತಿದೆ. ಈ ಭಾಗದಲ್ಲಿ ಗೂಡ್ಸ್ ರೈಲು ಹಾಗೂ ಪ್ರಯಾಣಿಕ ರೈಲುಗಳು ಸೇವೆ ನೀಡಿದರೆ ಮಲೆನಾಡಿನ ರೈತರು, ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ.












