ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಯುವತಿಯ ಭೀಕರ ಹತ್ಯೆ



(ನ್ಯೂಸ್‌ ಕಡಬ) newskadaba.com,  ನ.24 ಬೆಂಗಳೂರು : ರಾಜಧಾನಿಯಲ್ಲಿ ಯುವತಿಯೊಬ್ಬಳ ಭೀಕರ ಹತ್ಯೆ ನಡೆದಿದೆ. ಯುವಕನೊಬ್ಬ ಸ್ನೇಹಿತೆಯ ರೂಮ್‌ಗೆ ಕರೆದೊಯ್ದು ಯುವತಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ನಡೆದಿದೆ. ಆಂಧ್ರದ ಮೂಲದ ದೇವಿಶ್ರೀ (21) ಕೊಲೆಯಾದ ಯುವತಿ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.





ಮೂಲತಃ ಆಂಧ್ರದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ನಿವಾಸಿಯಾದ ದೇವಿಶ್ರೀ, ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ ದೇವಿಶ್ರೀ, ಭಾನುವಾರ ಬೆಳಗ್ಗೆ ಪ್ರೇಮ್ ವರ್ಧನ್ ಎಂಬಾತನ ಜತೆ ಸ್ನೇಹಿತೆ ರೂಮ್‌ಗೆ ತೆರಳಿದ್ದಳು. ಅಲ್ಲಿ ಆಕೆಯನ್ನು ಕೊಲೆ ಮಾಡಿ ಯುವಕ ಒಬ್ಬನೇ ವಾಪಸ್ ಆಗಿದ್ದಾನೆ.






ಸೋಮವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಮೃತ ದೇವಿಶ್ರೀ, ರೆಡ್ಡಪ್ಪ ಮತ್ತು ಜಗದಂಬಾ ದಂಪತಿಯ ಕೊನೆಯ ಮಗಳು. ಚೆನ್ನಾಗಿ ಓದಲಿ ಅಂತ ಪೋಷಕರು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿಸಿದ್ದರು. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತಲೆಮರೆಸಿಕೊಂಡಿರುವ ಪ್ರೇಮ್ ವರ್ಧನ್‌ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

 

error: Content is protected !!
Scroll to Top