ಉಡುಪಿಯಲ್ಲಿ ಶ್ರೀ ಕೃಷ್ಣ ಲೀಲೋತ್ಸವ ಅದ್ಧೂರಿ ಸಂಭ್ರಮ – ಲಕ್ಷಾಂತರ ಭಕ್ತರು ಸಾಕ್ಷಿ



(ನ್ಯೂಸ್‌ ಕಡಬ) newskadaba.com,  ಸೆ.16 ಉಡುಪಿ :  ಬಹುನಿರೀಕ್ಷಿತ ಶ್ರೀ ಕೃಷ್ಣ ವಿಟ್ಲ ಪಿಂಡಿ ಮಹೋತ್ಸವ ಸೋಮವಾರ ಉಡುಪಿಯಲ್ಲಿ ಅದ್ಧೂರಿ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ದಿನ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಸಂಭ್ರಮಿಸಿದರು





ಸೌರಮಾನ ಪಂಚಾಂಗದ ಪ್ರಕಾರ ರವಿವಾರ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಧ್ಯರಾತ್ರಿ ಸಾಂಪ್ರದಾಯಿಕ ಅರ್ಘ್ಯ ಪ್ರಧಾನ ವಿಧಿವಿಧಾನದ ಬಳಿಕ ಹಬ್ಬದ ಆಚರಣೆಗಳು ಆರಂಭವಾದವು. ಸರಿಯಾಗಿ 12:11 ಕ್ಕೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಶ್ರೀ ಕೃಷ್ಣನಿಗೆ ಅರ್ಘ್ಯವನ್ನು ಅರ್ಪಿಸಿದರು. ನಂತರ ಪವಿತ್ರ ತುಳಸಿ ಕಟ್ಟೆಯ ಮುಂದೆ ಚಂದ್ರನಿಗೆ ಅರ್ಘ್ಯ ಅರ್ಪಿಸಿದರು.






ಉಡುಪಿ ಅಷ್ಟಮಿಯ ಪ್ರಮುಖ ಆಕರ್ಷಣೆಯಾದ ವಿಟ್ಲ ಪಿಂಡಿ ಮಹೋತ್ಸವದಂದು, ಸಾಂಪ್ರದಾಯಿಕ ಸಿಹಿ ಖಾದ್ಯವಾದ ಹಾಲು ಪಾಯಸವನ್ನು ನೀಡಿ ಅನ್ನಸಂತರ್ಪಣೆ ಮಾಡಲಾಯಿತು. ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಚಿನ್ನದ ರಥದಲ್ಲಿ ಶ್ರೀ ಕೃಷ್ಣನ ಮಣ್ಣಿನ ವಿಗ್ರಹವನ್ನು ಇರಿಸಿ, ಅದಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಸಾಂಪ್ರದಾಯಿಕವಾಗಿ ಉಡುಗೆ ತೊಟ್ಟ ಗೋಪಾಲರು ಕೃಷ್ಣನ ಬಾಲ್ಯದ ಚೇಷ್ಟೆಗಳನ್ನು ಪ್ರತಿನಿಧಿಸುವ ಹಳೆಯ ಸಂಪ್ರದಾಯವನ್ನು ನೆನಪಿಸುವ ಹಾಗೆ ಎತ್ತರದಲ್ಲಿ ಕಟ್ಟಿದ ಮೊಸರು ತುಂಬಿದ ಮಡಿಕೆಗಳನ್ನು ಒಡೆದರು.

ದೇವಸ್ಥಾನದ ರಥಬೀದಿಯು ವರ್ಣರಂಜಿತ ಮೆರವಣಿಗೆಯಿಂದ ಜೀವಂತವಾಯಿತು. ಸಾಂಪ್ರದಾಯಿಕ ಜಾನಪದ ನೃತ್ಯಗಳು ಮತ್ತು ವೇಷಭೂಷಣಗಳಿಂದ ಹಿಡಿದು ಹುಲಿವೇಷದ ಪ್ರದರ್ಶನಗಳವರೆಗೆ, ರಸ್ತೆಗಳು ಸಂಗೀತ, ಜಯಕಾರ ಮತ್ತು ಭಕ್ತಿಯ ಸಂಭ್ರಮದಿಂದ ಮಾರ್ದನಿಸಿದವು.ಈ ಆಚರಣೆಗಳು ಶ್ರೀ ಕೃಷ್ಣನ ಮಣ್ಣಿನ ವಿಗ್ರಹದ ಜಲಸ್ತಂಭನದೊಂದಿಗೆ ಕೊನೆಗೊಂಡಿತು.

error: Content is protected !!
Scroll to Top