ಕಡಬ: ಮಾಜಿ ಸೈನಿಕರ ಸಂಘಕ್ಕೆ ನೂತನ ಸಮಿತಿ ರಚನೆ ಅಧ್ಯಕ್ಷರಾಗಿ ಸೆಬಾಸ್ಟಿನ್ ಕೆ.ಕೆ. ಅವಿರೋಧ ಆಯ್ಕೆ



(ನ್ಯೂಸ್ ಕಡಬ) newskadaba.com ಕಡಬ, ಜು. 29. ತುಳುನಾಡು ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮವು ಕಡಬ ಗೌಡ ಸಮಾಜ ಸಭಾಭವನದಲ್ಲಿ ಅದ್ದೂರಿಯಾಗಿ ಜರಗಿತು.







ಸಂಘದ ಸ್ಥಾಪಕಾಧ್ಯಕ್ಷರಾದ ಮಾಥ್ಯೂ ಟಿ.ಜಿ. ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಸಂಘದ ವಿವಿಧ ಚಟುವಟಿಕೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು.






ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಎನ್. ವಾರ್ಷಿಕ ವರದಿ ಮಂಡಿಸಿದ್ದು, ಕೋಶಾಧಿಕಾರಿ ಸುಬ್ರಾಯ ಬೈಪಾಡಿತಾಯ ಅವರು ಹಣಕಾಸು ಲೆಕ್ಕಪತ್ರವನ್ನು ಮಂಡಿಸಿದರು. ಕಾರ್ಗಿಲ್ ವಿಜಯದ ಹಿನ್ನೆಲೆ ಬಗ್ಗೆ ಎ.ವಿ.ಗೌಡ ಬಂಟ್ವಾಳ ಮಾಹಿತಿ ನೀಡಿದರು. ಸಂಘದ ಚುನಾವಣಾಧಿಕಾರಿಯಾಗಿ ಮಾಥ್ಯೂ ಟಿ.ಜಿ. ನೇಮಕಗೊಂಡು, ಸಮಿತಿಯ ಹೊಸಚುನಾವಣೆ ನಿರ್ವಹಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಸೆಬಾಸ್ಟಿನ್ ಕೆ.ಕೆ. ಉದನೆ ಅವರನ್ನು ಎಲ್ಲ ಸದಸ್ಯರ ಸರ್ವಾನುಮತದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಇಚ್ಲಂಪಾಡಿಯ ಪೌಲೋಸ್ ಪಿ.ಸಿ, ಕೋಶಾಧಿಕಾರಿಯಾಗಿ ನೆಲ್ಯಾಡಿಯ ಸ್ಟೀಫನ್ ಎ., ಉಪಾಧ್ಯಕ್ಷರಾಗಿ ಬೆತ್ತೋಡಿಯ ಓಡಿಯಪ್ಪ ಗೌಡ ಹಾಗೂ ಜಾರ್ಜ್ ವಿ.ಎಂ. ನೆಲ್ಯಾಡಿ, ಜೊತೆ ಕಾರ್ಯದರ್ಶಿಯಾಗಿ ಹರೀಶ್ಚಂದ್ರ ಇಚ್ಲಂಪಾಡಿ, ಜೊತೆ ಕೋಶಾಧಿಕಾರಿಯಾಗಿ ಸೋಮಶೇಖರ್ ಎನ್., ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲ್ ವಿ. ಮತ್ತು ಗೌರವ ಅಧ್ಯಕ್ಷರಾಗಿ ಸುಬ್ರಾಯ ಬೈಪಾಡಿತಾಯ ಆಯ್ಕೆಯಾದರು.

ಪರಿವಾರ ಸಮೇತ ಸಭೆಗೆ ಭಾರಿ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದು, ನೂತನ ಅಧ್ಯಕ್ಷ ಸೆಬಾಸ್ಟಿನ್ ಕೆ.ಕೆ. ಅವರು ಮಾತನಾಡಿ, “ಸಂಘದ ಸದಸ್ಯರ ಸಮಸ್ಯೆಗಳ ಪರಿಹಾರ ಹಾಗೂ ಸಂಘದ ಪ್ರಗತಿಗೆ ಸಮರ್ಪಿತವಾಗಿ ಕಾರ್ಯನಿರ್ವಹಿಸುತ್ತೇವೆ” ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಪೂರ್ವಭಾಗದಲ್ಲಿ ದೀಪ ಬೆಳಗಿಸುವ ಮೂಲಕ ನೂತನ ಅಧ್ಯಕ್ಷರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ವೀರನಾರಿಯರ ಸಂಘದ ಜಿಲ್ಲಾಧ್ಯಕ್ಷೆ ಗೀತಾ ಪ್ರಾರ್ಥನೆಗೈದರು. ಜಿಲ್ಲಾಧ್ಯಕ್ಷ ಜೆ.ಪಿ.ಎಂ. ಚೆರಿಯನ್ ಹಾಗೂ ವಾಸುದೇವ ಬಾನಡ್ಕ ಶುಭ ಹಾರೈಸಿದರು.

ಸೋಮಶೇಖರ್ ಎನ್. ಕಾರ್ಯಕ್ರಮ ನಿರೂಪಿಸಿದರು, ಸುಬ್ರಹ್ಮಣ್ಯ ಹೈತಾಡಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

error: Content is protected !!
Scroll to Top