ಡಾ:ಬಿ.ಆರ್ ಅಂಬೇಡ್ಕರ್ ನಿಗಮದಿಂದ ವಿವಿದೆಡೆ ಜಮೀನು ಖರೀದಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 23. ಡಾ:ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರತಿಷ್ಠಿತ ಭೂ ಒಡೆತನ ಯೋಜನೆಯನ್ನು ಅನುಷ್ಠಾನಗೊಳಿಸಲು ಪರಿಶಿಷ್ಟ ಜಾತಿಯ ಭೂ ರಹಿತ ಮಹಿಳಾ ಅರ್ಜಿದಾರರಿಂದ ಎಡಮಂಗಲ (ಕಡಬ ತಾಲೂಕು), ಸುಳ್ಯ ಕಸಬ (ಸುಳ್ಯ), ಜಾಲ್ಸೂರು (ಸುಳ್ಯ), ಕಡೇಶಿವಾಲಯ (ಬಂಟ್ವಾಳ ತಾಲೂಕು) ಗ್ರಾಮಗಳಲ್ಲಿ ಅರ್ಜಿಗಳು ಸ್ವೀಕೃತಗೊಂಡಿರುತ್ತದೆ.
ಫಲಾಪೇಕ್ಷಿಗಳಿಗೆ ನಿಗಮದ ಮುಖಾಂತರ ಕನಿಷ್ಟ 0.50 ರಿಂದ 1.00 ಎಕ್ರೆ ಕೃಷಿ ಮತ್ತು ಕೃಷಿ ಯೋಗ್ಯ ಜಮೀನನ್ನು ಖರೀದಿ ಮಾಡಿ ನೀಡಬೇಕಾಗಿರುವುದರಿಂದ ನಿಗಮಕ್ಕೆ ಜಮೀನು ಮಾರಾಟ ಮಾಡಲು ಆಸಕ್ತಿ ಹೊಂದಿರುವ ಭೂ ಮಾಲೀಕರು ಜಿಲ್ಲಾ ಕಛೇರಿಯನ್ನು ಸಂಪರ್ಕಿಸಬೇಕು. ಜಮೀನು ಮಾರಾಟ ಮಾಡುವ ಭೂ ಮಾಲೀಕರು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಸೇರಿರಬಾರದು ಹಾಗೂ ತಲಾ ಎಕರೆಗೆ ರೂ.20.00 ಲಕ್ಷದವರೆಗೆ ದರ ನಿಗದಿಪಡಿಸಲಾಗುತ್ತದೆ. ಅರ್ಜಿದಾರರ ವಾಸಸ್ಥಳದಿಂದ 10 ಕಿ.ಮೀ ವ್ಯಾಪ್ತಿಯ ಒಳಗಡೆ ಇರುವ ಜಮೀನನ್ನು ಪರಿಗಣಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 31.
ಹೆಚ್ಚಿನ ಮಾಹಿತಿಗೆ ಪಡೀಲ್ “ಪ್ರಜಾಸೌಧ” ಜಿಲ್ಲಾ ಆಡಳಿತ ಕೇಂದ್ರದ ನೆಲಮಹಡಿಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ (ದೂ.ಸಂ:- 8050854058) ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top