(ನ್ಯೂಸ್ ಕಡಬ) newskadaba.com ಜೂ. 30. ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ದ.ಕ. ಜಿಲ್ಲೆಯಲ್ಲಿ ಕೆಂಪುಕಲ್ಲು ಪಾಯಗಳು ಬಂದ್ ಆಗಿದ್ದು, ಇದಕ್ಕೆ ಪರಿಹಾರ ಕಲ್ಪಿಸದಿದ್ದಲ್ಲಿ ಜುಲೈ 3ರಂದು ಬೃಹತ್ ಪ್ರತಿಭಟನೆ ನಡೆಸಲು ದ.ಕ ಜಿಲ್ಲಾ ಕೆಂಪುಕಲ್ಲು ಪಾಯ ಹಾಗೂ ಲಾರಿ ಮಾಲಕರ ಒಕ್ಕೂಟ ನಿರ್ಧರಿಸಿದೆ.
ಈ ಬಗ್ಗೆ ಒಕ್ಕೂಟವು ಬಿಸಿರೋಡಿನ ಖಾಸಗಿ ಸಭಾಂಗಣವೊಂದರಲ್ಲಿ ಸಭೆ ನಡೆಸಿ ಚರ್ಚಿಸಿದ್ದು, ಜೂನ್ 30(ಇಂದು) ನಡೆಯಲಿರುವ ಸಭೆಯಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಮುಂದಕ್ಕೆ ರಾಜಕೀಯ ರಹಿತವಾಗಿ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಪ್ರತಿಭಟನೆಯಲ್ಲಿ ಕನಿಷ್ಟ ಹತ್ತು ಸಾವಿರ ಮಂದಿ ಭಾಗಿಯಾಗುವಂತೆ ಮಾಡುವ ನಿಟ್ಟಿನಲ್ಲಿ ವಲಯವಾರು ಸಭೆಗಳನ್ನು ನಡೆಸುವುದು.
ಅನಿವಾರ್ಯವೆಂದರೆ ಉಪವಾಸ ಸತ್ಯಾಗ್ರಹ ನಡೆಸುವುದು. ಅಗತ್ಯ ಬಿದ್ದರೆ ಹೈಕೋರ್ಟ್ ಮೊರೆ ಹೋಗುವ ಬಗ್ಗೆಯೂ ತೀರ್ಮಾನಿಸಲಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆಂಪುಕಲ್ಲು ಪಾಯ ಹಾಗೂ ಲಾರಿ ಮಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ ತಿಳಿಸಿದರು.









