➤➤ ವಿಶೇಷ ಲೇಖನ ಡಿಸೆಂಬರ್ 22- ರಾಷ್ಟ್ರಿಯ ಗಣಿತ ಶಾಸ್ತ್ರ ದಿನ ✍️ಡಾ|| ಮುರಲೀ ಮೋಹನ್‌ಚೂಂತಾರು

(ನ್ಯೂಸ್ ಕಡಬ) newskadaba.com ಡಿ. 22. ಪ್ರತಿ ವರ್ಷ ಡಿಸೆಂಬರ್ 22 ರಂದು ‘ರಾಷ್ಟ್ರೀಯ ಗಣಿತ ಶಾಸ್ತ್ರ ದಿನ’ ಎಂದು ಆಚರಣೆ ಮಾಡಿ ಗಣಿತ ಶಾಸ್ತ್ರಕ್ಕೆ ಅಮೋಘ ಕೊಡುಗೆ ನೀಡಿದ ಮಹಾನ್ ಗಣಿತ ಶಾಸ್ತ್ರಜ್ಞ ಶ್ರೀನಿವಾಸನ್ ರಾಮಾನುಜನ್ ಅವರನ್ನು ನೆನಪಿಸಿಕೊಂಡು ಅವರು ಗಣಿತ ಶಾಸ್ತ್ರಕ್ಕೆ ನೀಡಿದ ಸೇವೆಯನ್ನು ಸ್ಮರಿಸುವ ಕಾರ‍್ಯವನ್ನು  ರಾಷ್ಟ್ರದಾದ್ಯಂತ  ಮಾಡಲಾಗುತ್ತದೆ. ಇದರ ಜೊತೆಗೆ ಯುವಜನರಲ್ಲಿ ಮತ್ತು ಮಕ್ಕಳಲ್ಲಿ ಗಣಿತ ಶಾಸ್ತ್ರದ ಬಗ್ಗೆ ಹೆಚ್ಚಿನ ಒಲವು ಮತ್ತು ಆಸಕ್ತಿ ಮೂಡಿಸಿ ಯುವ ಪ್ರತಿಭೆಗಳನ್ನು ಗಣಿತ ಶಾಸ್ತ್ರದ ಸಂಶೋಧನೆಗಳತ್ತ ಮುಖ ಮಾಡಿಸುವ ಸದುದ್ದೇಶ ಕೂಡ ಅಡಗಿದೆ. ಜಗತ್ತು ಕಂಡ ಶ್ರೇಷ್ಠ ಗಣಿತಜ್ಞ ಶ್ರೀ ಶ್ರೀನಿವಾಸನ್ ಐಯ್ಯಂಗಾರ್ ರಾಮಾನುಜನ್ ಅವರ 125ನೇ ಜನ್ಮ ಶತಾಬ್ದಿ ಸಂಭ್ರಮದ ಸಮಯವಾದ ಡಿಸೆಂಬರ್ 22, 2012 ರಂದು ಅಂದಿನ ನಮ್ಮ ದೇಶದ ಪ್ರಧಾನಿ ಶ್ರೀ ಮನಮೋಹನ್ ಸಿಂಗ್ ಅವರು ಚೆನೈನಲ್ಲಿ ಈ ‘ರಾಷ್ಟ್ರೀಯ ಗಣಿತ ಶಾಸ್ತ್ರ’ ದಿನಾಚರಣೆಗೆ ನಾಂದಿ ಹಾಡಿದರು.  ಅಂದಿನಿಂದ ಪ್ರತಿವರ್ಷ ಡಿಸೆಂಬರ್ 22 ರಂದು ರಾಷ್ಟ್ರದಾದ್ಯಂತ ರಾಷ್ಟ್ರೀಯ ಗಣಿತ ಶಾಸ್ತ್ರ ದಿನದ ಅಂಗವಾಗಿ ಗಣಿತ ಶಾಸ್ತ್ರದ ಸೆಮಿನಾರ್ ವರ್ಕ್ ಶಾಪ್ ಮತ್ತು ಕ್ವಿಜ್‌ಗಳನ್ನು ಏರ್ಪಡಿಸಿ ಮಕ್ಕಳಲ್ಲಿ ಗಣಿತಶಾಸ್ತ್ರದ ಬಗ್ಗೆ ಒಲವು ಮೂಡಿಸಲಾಗುತ್ತಿದೆ ಮತ್ತು ಶ್ರೀನಿವಾಸನ್ ರಾಮಾನುಜನ್ ಜಗತ್ತಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಕಾರ್ಯ ನಡೆಸಲಾಗುತ್ತದೆ.

ಯಾರಿವರು ರಾಮಾನುಜನ್?

 

ಶ್ರೀನಿವಾಸನ್ ಅಯ್ಯಂಗಾರ್ ರಾಮಾನುಜನ್, 1887ನೇ ಇಸವಿ ಡಿಸೆಂಬರ್ 22 ರಂದು ಇರೋಡ್ (ತಮಿಳುನಾಡು)ನಲ್ಲಿ ಜನಿಸಿದರು. ಅತ್ಯಂತ ಕಡುಬಡುತನದ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದ ರಾಮಾನುಜನ್ ಕೇವಲ 32 ವರ್ಷ ಬದುಕಿದ್ದು, 1920 ಏಪ್ರಿಲ್ 26 ರಂದು ವಿಧಿವಶರಾದರು.  ಆದರೆ ಅಷ್ಟು ಕಡಿಮೆ ಅವಧಿಯಲ್ಲಿ ಅವರು ಸಾಧಿಸಿದ ಸಾಧನೆ ಮಾತ್ರ ಊಹೆಗೂ ನಿಲುಕದ್ದು.  ಬಹಳ ಮೇಧಾವಿಯಾಗಿದ್ದ ಆತ ತನ್ನ 12ನೇ ವಯಸ್ಸಿಗೆ ಟ್ರಿಗ್ನೂಮೆಟ್ರಿಯನ್ನು ಕರಗತ ಮಾಡಿ ತನ್ನದೇ ಆದ ವಿಚಾರಗಳನ್ನು ಥಿಯರಮ್ ಮತ್ತು ಐಡಿಯಾಗಳನ್ನು ಪ್ರತಿಪಾದಿಸಿದ.  ಕಡುಬಡತನವಿದ್ದರೂ ಸ್ನೆಹಿತರಿಂದ ಪುಸ್ತಕಗಳನ್ನು ಪಡೆದು ಓದುತ್ತಿದ್ದು,  ಜೀವನೋಪಾಯಕ್ಕಾಗಿ ಕ್ಲರ್ಕ್ ಕೆಲಸ ಮಾಡಿ ತನ್ನ ಓದಿನ ಅಗತ್ಯಗಳನ್ನು ಪೂರೈಸುತ್ತಿದ್ದು  ಗಣಿತಶಾಸ್ತ್ರದ ಅತೀ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸಿ ತನ್ನದೇ ಆದ ಥಿಯರಿ ಮತ್ತು ಹೊಸ ಹೊಸ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದ.  ಅವರ ಅಗಾಧ ಪ್ರತಿಭೆಗೆ ಮಾರುಹೋಗದ ಜನರೇ ಇರಲಿಲ್ಲ.  ಆತನ ಆಗಾಧ ಪ್ರತಿಭೆ ಹಾಗೂ ಬುದ್ದಿಶಕ್ತಿಯನ್ನು ಒಬ್ಬ ಇಂಗ್ಲೀಷ್ ಯುವಕ ಗುರುತಿಸಿ ಆತನನ್ನು ಆಕ್ಸ್ಪರ್ಡ್ ಯುನಿವರ್ಸಿಟಿಯ ಪ್ರೋಫೆಸರ್ ಹಾರ್ಡಿಯವರ ಬಳಿ ಕಳುಹಿಸುವ ವ್ಯವಸ್ಥೆ ಮಾಡುತ್ತಾನೆ.  ಅಲ್ಲಿಂದ ರಾಮಾನುಜನ್ ಅವರ ಗಣಿತ ಶಾಸ್ತ್ರದ ಅಮೋಘ ಪ್ರಯಾಣ ಆರಂಭವಾಯಿತು. ಗಣಿತಶಾಸ್ತ್ರದ ಕ್ಲಿಷ್ಟ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸುತ್ತಿದ್ದರು. ಯಾರ ಸಹಾಯವಿಲ್ಲದೆ, ತನ್ನದೇ ಆದ ವಿಚಾರಗಳನ್ನು ಪ್ರತಿಪಾದಿಸಿ ಅದನ್ನು ಸಾಧಿಸುವ ಛಲ ಮತ್ತು ಕೌಶಲ ಆತನಿಗಿತ್ತು. ಆತ ಹೆಚ್ಚಿನ ಎಲ್ಲಾ ಸಂಶೋಧನೆಗಳು ಭಾರತೀಯ ಗಣಿತ ಶಾಸ್ತ್ರ ನಿಯತಕಾಲಿಕಗಳಲ್ಲಿ ಪ್ರಕಟವಾಗಿತ್ತು. ಸುಮಾರು 3900ಕ್ಕೂ ಹೆಚ್ಚು ಕ್ಲಿಷ್ಟ ಸಮಸ್ಯೆಗಳನ್ನು ಗುರುತಿಸಿ ದಾಖಲಾತಿಯನ್ನು ಅತೀ ಕಡಿಮೆ ಅವಧಿಯಲ್ಲಿ ಮಾಡಿ ವಿಶ್ವವಿಖ್ಯಾತಿ ಗಳಿಸಿದ್ದರು. ರಾಮನುಜನ್  ಪ್ರೈಮ್, ರಾಮಾನುಜನ್ ಥೀಟಾ ಪಂಕ್ಷನ್, ಪಾರ್ಟಿಷನ್ ಪಾರ್ಮುಲಾ, ಮ್ಯಾಕ್ ಥೀಟಾ ಪಂಕ್ಷನ್ ಹೀಗೆ ನೂರಾರು ವಿಚಾರಗಳು, ಸಂಶೋಧನೆಗಳು ಜಗತ್‌ ವಿಖ್ಯಾತಿಯಾಗಿದೆ. ಅತೀ ಕಡಿಮೆ ಅವಧಿಯಲ್ಲಿ ಆತ ಮಾಡಿದ  ಈ ಸಾಧನೆಗಳು ಮತ್ತಷ್ಟು ಹೆಚ್ಚಿನ ಸಂಶೋಧನೆಗಳಿಗೆ ರಹದಾರಿಯನ್ನು ತೋರಿಸಿತ್ತು. ಇದು ಇನ್ನಿತರ ಹೊಸ ಹೊಸ ಪ್ರತಿಭೆಗಳಿಗೆ ಮತ್ತಷ್ಟು ಹುಮ್ಮಸ್ಸು ತುಂಬಿ ಗಣಿತ ಶಾಸ್ತ್ರದ ಬಗ್ಗೆ ಹೆಚ್ಚು ಹೆಚ್ಚು ಜನರು ಮುಖ ಮಾಡುವಂತೆ ಪ್ರೇರೇಪಣೆ ನೀಡಿತ್ತು ಎಂದರೆ ತಪ್ಪಾಗಲಾರದು. ಗಣಿತ ಶಾಸ್ತ್ರದ ಮೇಲೆ ವಿಪರೀತ ಮೋಹ ಹೊಂದಿದ್ದ ಶ್ರೀ ರಾಮಾನುಜನ್ ಇತರ ವಿಷಯಗಳಲ್ಲಿ  ಆಸಕ್ತಿ ಹೊಂದಿರಲಿಲ್ಲ. 1904ರಲ್ಲಿ ಸರ್ಕಾರಿ  ಆರ್ಟ್ ಕಾಲೇಜು  ಕುಂಬಕೋಣಮ್ ಇಲ್ಲಿ ದಾಖಲಾತಿಯಾದರೂ ಗಣಿತದಲ್ಲಿ ವಿಶೇಷ ವ್ಯಾಮೋಹದ ಕಾರಣದಿಂದ ಇತರ ವಿಷಯಗಳಲ್ಲಿ ಅನುತ್ತೀರ್ಣರಾದ ಕಾರಣ ಪದವಿಗಳಿಸಲಿಲ್ಲ. 14ನೇ ವಯಸ್ಸಿನಲ್ಲಿ  ಮನೆಯಿಂದ ಓಡಿ ಹೋಗಿ ತನ್ನ ಗಣಿತಶಾಸ್ತ್ರದ ದಾಹವನ್ನು  ತೀರಿಸಲು ಯತ್ನಿಸಿದ್ದರು.  1912ರಲ್ಲಿ ಭಾರತೀಯ ಗಣಿತ ಶಾಸ್ತ್ರ ಸೊಸೈಟಿ ಇದರ ಸಂಸ್ಥಾಪಕರಾದ  ಶ್ರೀ ರಾಮಸ್ವಾಮಿ ಅಯ್ಯರ್  ಅವರು ರಾಮಾನುಜನ್ ಅವರ ಪ್ರತಿಭೆ ಗುರುತಿಸಿ ಆತನಿಗೆ ಮದ್ರಾಸ್ ಪೋರ್ಟ್ ಟ್ರಸ್ಟ್ ನಲ್ಲಿ ಕ್ಲರ್ಕ್ ಕೆಲಸ ನೀಡಿದರು. ಇದರಿಂದ ಮತ್ತಷ್ಟು ಪ್ರಚೋದಿತರಾಗಿ ತನ್ನ ಎಲ್ಲಾ ಸಂಶೋಧನೆಗಳನ್ನು ಇಂಗ್ಲೆಂಡ್ ಗಣಿತಶಾಸ್ತ್ರಜ್ಞರಿಗೆ ರಾಮಾನುಜನ್ ಕಳುಹಿಸಲು ಆರಂಭಿಸಿದರು. 1913ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಜಿ.ಹೆಚ್. ಹಾರ್ಡಿ ಇವರು ಆತನಿಗೆ ಪತ್ರ ಬರೆದು  ಆತನನ್ನು ಇಂಗ್ಲೆಂಡ್‌ಗೆ ಆಹ್ವಾನಿಸಿದರು. 1914ರಲ್ಲಿ ಇಂಗ್ಲೆಂಡ್‌ಗೆ ತಲುಪಿ ಟ್ರಿನಿಟಿ ಕಾಲೇಜಿಗೆ ಸೇರುತ್ತಾರೆ. 1917ರಲ್ಲಿ ಲಂಡನ್ ಗಣಿತಶಾಸ್ತ್ರ ಸೊಸೈಟಿ ಇದರ ಸದಸ್ಯರಾದರು. 1918ರಲ್ಲಿ ರಾಯಲ್ ಸೊಸೈಟಿ ಫೆಲೋ ಆಗಿ ಆಯ್ಕೆಯಾಗಿ ಅತೀ ಚಿಕ್ಕ ವಯಸ್ಸಿನಲ್ಲಿ  ಇದರ ಸದಸ್ಯರಾದ ಹಿರಿಮೆ ಅವರದು. ಅದರೆ ಇಂಗ್ಲೆಂಡ್‌ನ ಆಹಾರ ಮತ್ತು ವಾತಾವರಣ ಅವರಿಗೆ ಹಿಡಿಸದೆ ಆರೋಗ್ಯ ಕೈಕೊಡುತ್ತದೆ. 1919ರಲ್ಲಿ ಆರೋಗ್ಯ ಸಮಸ್ಯೆಯಿಂದ  ಭಾರತಕ್ಕೆ ವಾಪಸಾಗುತ್ತಾರೆ. ಹದಗೆಟ್ಟ ಆರೋಗ್ಯ ಮತ್ತಷ್ಟು ಕಾಡಿ 1920ರಲ್ಲಿಯೇ ಇಹಲೋಕ ತ್ಯಜಿಸಿದರು. ಕೇವಲ 32 ವರ್ಷ ಬದುಕಿದ್ದರೂ ಸಾವಿರಾರು ವಿಚಾರಗಳನ್ನು ಪ್ರಬಂಧಗಳನ್ನು ಮುಂದೆ ನೂರಾರು ಸಂಶೋಧನೆಗಳನ್ನು ಮಾಡಿ ಯುವ ಪೀಳಿಗೆಯ ಜನರಿಗೆ ಬಹಳಷ್ಟು ಸ್ಪೂರ್ತಿ ನೀಡಿ ‘ಗಣಿತಶಾಸ್ತ್ರ’ ಕ್ಕೆ ಅದ್ಬುತವಾದ ಕೊಡುಗೆ ನೀಡಿರುವುದೇ  ಸೂರ‍್ಯಚಂದ್ರರಷ್ಟೇ ಸತ್ಯವಾದ ಮಾತು.

Also Read  *ಎಲ್ಲೆಲ್ಲೂ ಸಂಕ್ರಾಂತಿ ಹಬ್ಬದ ಸಂಭ್ರಮ ಸಡಗರ* ✍ ಆಶಿತಾ ಎಸ್ ಗೌಡ

 

ಏನಿದು  ಹಾರ್ಡಿ – ರಾಮಾನುಜನ್ ನಂಬರ್ ?   

ಈ ಹಾರ್ಡಿ-ರಾಮಾನುಜನ್  ನಂಬರ್‌ ನ ಹಿಂದೆ ಒಂದು ನಿಜವಾದ ರೋಚಕ ಕತೆ ಇದೆ. ಒಮ್ಮೆ ರಾಮಾನುಜನ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಆತನನ್ನು ನೋಡಲು ಖ್ಯಾತ ಬ್ರಿಟಿಷ್ ಗಣಿತಜ್ಞ ಡಿ.ಹೆಚ್. ಹಾರ್ಡಿ ಅವರು ಟ್ಯಾಕ್ಸಿಯಲ್ಲಿ ಬಂದಿದ್ದರು. ಅದರ ನಂಬರ್ 1729.  ರಾಮಾನುಜನ್ ಜೊತೆ  ಉಭಯಕುಶಲೊಪರಿ ವಿಚಾರಿಸುತ್ತಾ ಈ ವಿಚಾರವನ್ನು ಹಾರ್ಡಿ ರಾಮಾನುಜನ್‌ಗೆ ತಿಳಿಸುತ್ತಾ, 1729ರಂದು ಬಹಳ ಡಲ್ ಆಗಿರುವ ಏನು ವಿಶೇಷತೆ ಇಲ್ಲದ ನಂಬರ್ ಎಂದಾಗ ಅನಾರೋಗ್ಯದ ನಡುವೆಯೂ ರಾಮಾನುಜನ್ ಇದೊಂದು ಅತ್ಯಂತ ವಿಶೇಷ ನಂಬರ್ ಎಂದು ಹೇಳಿ ಅದರ ವಿಶೇಷತೆಯನ್ನು ಕ್ಷಣಾರ್ಧದಲ್ಲಿ ತಿಳಿಸಿದರು. ಈ ನಂಬರ್ ವಿಶೇಷತೆಯನ್ನು ರಾಮನುಜನ್ ಹೀಗೆ ಹೇಳಿರುತ್ತಾರೆ, ಇದೊಂದು ಅತೀ ವಿಶೇಷ ಸಂಖ್ಯೆಯಾಗಿದ್ದು, 2 ಸಂಖ್ಯೆಗಳ ಕ್ಯೂಬ್‌ಗಳನ್ನು ಕೂಡಿಸುವಾಗ ಸಿಗುವ  ಎರಡನೇ ಅತೀ ಚಿಕ್ಕ ನಂಬರ್ ಇದಾಗಿದೆ ಮತ್ತು ಎರಡು ರೀತಿಯಲ್ಲಿಯೂ ಈ ಸಂಖ್ಯೆಯನ್ನು ಕ್ಯೂಬ್‌ಗಳ ಮೊತ್ತವಾಗಿ ಕಾಣಬಹುದು ಎಂದು ಹೇಳಿದರು. (“It is a very interesting number; it is the smallest number expressible as the sum of two cubes in two different ways”) 1729 ರನ್ನು  1 X 1 X 1 + 12 X 12 X 12 + 1729 ರನ್ನು 9 X 9  X  9 + 10 X 10 X 10 =  1729 ಎಂಬುದಾಗಿ ವಿವರಿಸಿದಾಗ ಹಾರ್ಡಿ ದಿಗ್ಭ್ರಮೆಗೊಂಡರು. ಅಂದಿನಿಂದ 1729 “ಹಾರ್ಡಿ- ರಾಮನುಜನ್ ನಂಬರ್” ಎಂದು ಪ್ರಖ್ಯಾತಿಗೊಂಡಿತು.

Also Read  ಶ್ರೀ ಕ್ಷೇತ್ರ ಕಬ್ಬಾಳಮ್ಮ ದೇವಾಲಯದ ಮಾಹಿತಿ

 

ಕೊನೆಮಾತು:

ಗಣಿತಶಾಸ್ತ್ರವನ್ನು ಆಂಗ್ಲಭಾಷೆಯಲ್ಲಿ ಮ್ಯಾಥಮೆಟಿಕ್ಸ್ ಎಂದು ಕರೆಯುತ್ತಾರೆ. ಗ್ರೀಕ್ ಭಾಷೆಯಲ್ಲಿ ಮಥೇಮ್ ಎಂದರೆ ಜ್ಞಾನ ಎಂದರ್ಥ. ಈ ಗ್ರೀಕ್ ಶಬ್ಧದಿಂದ ಹುಟ್ಟಿದ ಗಣಿತಶಾಸ್ತ್ರದಲ್ಲಿ ನಂಬರ್ ಥಿಯರಿ, ಅಲ್ಜಿಬ್ರಾ, ಟ್ರಿಗ್ನೋಮೆಟ್ರಿ ಹೀಗೆ ಹಲವಾರು ವಿಷಯಗಳು ಹುದುಗಿದೆ. ಅರಿತಷ್ಟು ಆಳಕ್ಕೆ ಸರಿಯುವ ವಿಚಾರವೆಂದರೆ ಅದು ಗಣಿತಶಾಸ್ತ್ರ ಎಂದರೆ ತಪ್ಪಾಗಲಾರದು. ಆರ್ಕಿಮಿಡೀಸ್‌ ನನ್ನು ಗಣಿತಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ. ಭಾರತ ಕಂಡ ಶ್ರೇಷ್ಠ ಗಣಿತಜ್ಞರಲ್ಲಿ ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರ-II ವರಾಹಮಿಹಿರ, ಶ್ರೀನಿವಾಸ ರಾಮಾನುಜನ್ ಸೇರಿದ್ದಾರೆ.  ಆರ್ಯಭಟರನ್ನು ಭಾರತದ ಗಣಿತಶಾಸ್ತದ ಪಿತಾಮಹ ಎಂದು ಕರೆಯುತ್ತಾರೆ.

ಗಣಿತಶಾಸ್ತ್ರ ಎನ್ನುವುದು ಈಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಕಂಪ್ಯೂಟರ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ಇದೆ. ಇದರ ಮೂಲವೇ ಗಣಿತಶಾಸ್ತ್ರ. ಸೌರ ಮಂಡಲ, ಸೌರ ವಿಜ್ಞಾನ, ವಿಮಾನಯಾನ, ಅಥವಾ ಇನ್ನಾವುದೇ ವಿಚಾರದಲ್ಲಿ ಗಣಿತಶಾಸ್ತ್ರ ಇಲ್ಲದೇ ಏನನ್ನೂ ಕಂಡು ಹಿಡಿಯಲು ಸಾಧ್ಯವಿಲ್ಲ. ಸಾಧಿಸಲೂ ಸಾಧ್ಯವಿಲ್ಲ ನಮ್ಮ ಎಲ್ಲಾ ಲೆಕ್ಕಾಚಾರವೂ, ದೈನಂದಿನ ವ್ಯವಹಾರಗಳು ಗಣಿತಶಾಸ್ತ್ರದ ಮೇಲೆ ಅವಲಂಬಿತವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಯುವ ಪೀಳಿಗೆ ಗಣಿತಶಾಸ್ತ್ರದತ್ತ ಒಲವು ತೋರಿಸುವಂತಹ ಮಾರ್ಗದರ್ಶನ ನಾವು ಮಾಡಬೇಕು ಮತ್ತು ವಾತಾವರಣ ನಿರ್ಮಿಸಬೇಕಾಗಿದೆ. ಗಣಿತಶಾಸ್ತ್ರದಲ್ಲಿ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ. ನಮ್ಮ ಮಕ್ಕಳು ಬರೀ ವೈದ್ಯರು ಅಥವಾ ಇಂಜಿನಿಯರ್ ಆಗಬೇಕು ಎಂದು ಹೆತ್ತವರು ಬಯಸಬಾರದು. ಅವರಲ್ಲಿ ಗಣಿತಶಾಸ್ತ್ರದಲ್ಲಿ ವಿಶೇಷ ಪ್ರತಿಭೆ ಮತ್ತು ಆಸಕ್ತಿ ಇದ್ದಲ್ಲಿ ಅವರನ್ನು ಗಣಿತಶಾಸ್ತ್ರ ಕಲಿಯಲು ಉತ್ತೇಜಿಸಬೇಕು. ಹಾಗಾದರೆ ಮಾತ್ರ ಈ ‘ರಾಷ್ಟ್ರೀಯ  ಗಣಿತಶಾಸ್ತ್ರ ದಿನ’ ದ ಆಚರಣೆಗೆ ಹೆಚ್ಚಿನ ಮೌಲ್ಯ ಬಂದೀತು.  ಯುವ ಪೀಳಿಗೆಯ ಜನರು ಮೂಲ ವಿಜ್ಞಾನಗಳ ಬಗ್ಗೆ ಒಲವು ತೋರಿಸುವಂತೆ ಮಾಡಲು ಸರಕಾರ ಇನ್ನೂ ಹೆಚ್ಚಿನ ಪ್ರೋತ್ಸಾಹ, ಸಹಕಾರ ಮತ್ತು ಅನುದಾನ ನೀಡಬೇಕು. ಹೀಗೆ ಮಾಡಿದಲ್ಲಿ ಹೆಚ್ಚಿನ ಸಂಶೋಧನೆ ನಡೆದು ಭಾರತ ವಿಶ್ವದಲ್ಲಿ  ದೊಡ್ಡಣ್ಣನಾಗುವುದರಲ್ಲಿ ಸಂಶಯವೇ ಇಲ್ಲ. ಯಾಕೆಂದರೆ ನಮ್ಮ ಭಾರತ ದೇಶದಲ್ಲಿ ಪ್ರತಿಭೆಗೆ ಏನೂ ಕೊರತೆ ಇಲ್ಲ. ಸೂಕ್ತ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ ಬೆನ್ನು ತಟ್ಟಬೇಕಾದ ಅನಿವಾರ್ಯತೆ ಇದೆ. ಹಾಗೆ ಮಾಡಿದಲ್ಲಿ ನಮ್ಮ ಭಾರತ ದೇಶದಲ್ಲಿ ನೂರಾರು ಹೊಸ ಹೊಸ ರಾಮಾನುಜನ್‌ಗಳು ಮತ್ತಷ್ಟು ಹುಟ್ಟಿ ಬಂದು,  ಭಾರತ ಬೆಳಗುವುದರಲ್ಲಿ ಎರಡು ಮಾತೇ ಇಲ್ಲ. ಅದುವೇ ನಾವು ಶ್ರೀನಿವಾಸನ್ ಅಯ್ಯಂಗಾರ್ ರಾಮಾನುಜನ್ ಎಂಬ ಮಹಾನ್ ಚೇತನಕ್ಕೆ ನೀಡುವ ಬಹುದೊಡ್ಡ ಗೌರವ ಎಂದರೂ ತಪ್ಪಾಗಲಾರದು.

Also Read  ಕಡಬ: ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಸೆಂಟರ್ ಅಭಯ್ ಒಪ್ಟಿಶಿಯನ್ ಶುಭಾರಂಭ

   ಡಾ|| ಮುರಲೀ ಮೋಹನ್‌ಚೂಂತಾರು

 

error: Content is protected !!
Scroll to Top