(ನ್ಯೂಸ್ ಕಡಬ) newskadaba.com ಕಡಬ, ಫೆ. 08. ಕೊಂಬಾರಿನಲ್ಲಿರುವ ಎಸ್ಟೇಟ್ ನಲ್ಲಿ ಅಕ್ರಮ ಕಾಡು ಪ್ರಾಣಿಗಳ ಹತ್ಯೆ ಮತ್ತು ಜಾನುವಾರು ಹತ್ಯೆಯಾಗುತ್ತಿದೆ ಎಂಬ ಮಾಹಿತಿಯ ಕೇಳಿಬಂದ ಬೆನ್ನಲ್ಲೇ ಎಸ್ಟೇಟ್ ಒಳಗಿನಿಂದ ನಾಯಿಗಳು ಪ್ರಾಣಿಗಳ ಮೂಳೆಯನ್ನು ಕಚ್ಚಿಕೊಂಡು ಹೊರಗೆ ತಂದಿದ್ದು, ಇದನ್ನು ಗಮನಿಸಿದ ಊರವರು ಪೋಲಿಸರಿಗೆ ಮಾಹಿತಿ ನೀಡಿದ್ದ ಮೇರೆಗೆ ಕಡಬ ಎಸ್.ಐ. ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಎಸ್ಟೇಟ್ ಮಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಎಸ್ಟೇಟ್ ಒಳಗಡೆ ನಿರಂತರ ಕಾಡು ಪ್ರಾಣಿಗಳ ಹತ್ಯೆ ಮಾಡಲಾಗುತ್ತಿದೆ. ಅಲ್ಲದೇ ಜಾನುವಾರು ಹತ್ಯೆ ಮಾಡುತ್ತಿರುವ ಬಗ್ಗೆ ಈ ಹಿಂದೆ ಸಾಕಷ್ಟು ದೂರುಗಳು ಕೇಳಿ ಬರುತ್ತಿತ್ತು, ಇದಕ್ಕೆ ಪೂರಕ ಎಂಬಂತೆ ನಾಯಿಯೊಂದು ಪ್ರಾಣಿಗಳ ಅಸ್ಥಿಪಂಜರವನ್ನು ಎಸ್ಟೇಟ್ ಹೊರಗೆ ತಂದಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಕಡಬ ಠಾಣಾ ಎಸ್.ಐ. ರುಕ್ಮ ನಾಯ್ಕ್ ಅವರು ದಾಳಿ ನಡೆಸಿ ಮಾಲಕನನ್ನು ಹಾಗೂ ಪ್ರಾಣಿಯ ದೇಹದ ಭಾಗವೊಂದನ್ನು ವಶಪಡಿಸಿಕೊಂಡು ಠಾಣೆಗೆ ಕರೆ ತಂದ ಕೂಡಲೇ ಎಸ್ಟೇಟ್ ನ ಒಳಗಡೆ ಪ್ರಾಣಿಗಳ ಅಸ್ಥಿಪಂಜರಕ್ಕೆ ಬೆಂಕಿ ನೀಡಿ ಸುಡಲಾಗಿದೆ ಎಂಬ ಮಾಹಿತಿ ದೊರೆತಿದೆ.

ಅರಣ್ಯ ಇಲಾಖೆಯವರು ಎಚ್ಚೆತ್ತುಕೊಳ್ಳಿ-ಗ್ರಾಮಸ್ಥರ ಆಗ್ರಹ
ಎಸ್ಟೇಟ್ ಒಳಗಡೆ ಸಾರ್ವಜನಿಕರಿಗೆ ಪ್ರವೇಶ ಇಲ್ಲದ ಕಾರಣ ಅಲ್ಲಿ ನಡೆಯುವ ಚಟುವಟಿಕೆಗಳು ಯಾರಿಗೂ ತಿಳಿಯುತ್ತಿಲ್ಲ ಎನ್ನಲಾಗಿದ್ದು, ಆದರೂ ಅಲ್ಲಿಯ ಚಟುವಟಿಕೆಗಳ ಬಗ್ಗೆ ಗ್ರಾಮಸ್ಥರಿಗೆ ಕೆಲವೊಂದು ಮಾಹಿತಿಗಳು ಲಭ್ಯವಾಗಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಎಸ್ಟೇಟ್ ಒಳಗಡೆ ಕಾಡು ಪ್ರಾಣಿಗಳ ಹತ್ಯೆಯಾಗುತ್ತಿರುವ ಬಗ್ಗೆ ಗುಮಾನಿಯಿದ್ದು ಅರಣ್ಯ ಇಲಾಖೆಯವರು ಹಾಗೂ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.








