(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 20. ಮನೆ ಕಟ್ಟಲು ಸರಕಾರದಿಂದ ಸಿಗುವ ಅನುದಾನಕ್ಕಾಗಿ ಕಾಯುತ್ತಿದ್ದ ವಸತಿ ರಹಿತರಿಗೆ ರಾಜ್ಯ ಸರ್ಕಾರ ಕಹಿ ಸುದ್ದಿ ನೀಡಿದ್ದು, ಈ ಹಿಂದೆ ಗ್ರಾಮ ಪಂಚಾಯ್ತಿಗಳಿಗೆ ಮಂಜೂರಾಗಿದ್ದ 1.19 ಲಕ್ಷ ಮನೆಗಳ ಆದೇಶವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದೆ.

ರಾಜ್ಯದ ಪ್ರತೀ ಗ್ರಾಮ ಪಂಚಾಯತ್ ಗೆ 20 ಮನೆಗಳನ್ನು ಮಂಜೂರು ಮಾಡಿ 2018-19 ನೇ ಸಾಲಿನಲ್ಲಿ ಅಧಿಕಾರದಲ್ಲಿದ್ದ ಮೈತ್ರಿ ಸರ್ಕಾರ ಘೋಷಿಸಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಯೋಜನೆಯನ್ನೇ ರದ್ದು ಮಾಡುವ ಮೂಲಕ ಮನೆಯ ನಿರೀಕ್ಷೆಯಲ್ಲಿದ್ದ ವಸತಿ ರಹಿತರಿಗೆ ಬಿಗ್ ಶಾಕ್ ನೀಡಿದೆ. ಇದಕ್ಕೂ ಮೊದಲು 2011 ರ ಜನಗಣತಿ ಆಧರಿಸಿ ವಸತಿ ರಹಿತರನ್ನು ಗುರುತಿಸಿ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತಿತ್ತು. ಬಳಿಕ 2018 ರ ರಾಜೀವ್ ಗಾಂಧಿ ವಸತಿ ನಿಗಮ ಸರ್ವೆ ನಡೆಸಿದ ವಸತಿ ರಹಿತ ಪಟ್ಟಿ ಆಧರಿಸಿ ಫಲಾನುಭವಿಗಳ ಆಯ್ಕೆಗೆ ಸೂಚನೆ ನೀಡಿತ್ತು. ನಂತರ ಪ್ರತಿ ಗ್ರಾ.ಪಂ.ಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡಿ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಈವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಾರದ ಹಿನ್ನೆಲೆ 1,92,240 ಮನೆಗಳನ್ನು ಹಿಂದಕ್ಕೆ ಪಡೆದಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.













