ರಾಜು ಹೊಸ್ಮಠ ಬಂಧನವಾಗದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ➤ 7 ದಲಿತ ಸಂಘಟನೆಗಳ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 19. ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್‌ನ ಅಧ್ಯಕ್ಷ ರಾಜು ಹೊಸ್ಮಠ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿ 12 ದಿನ ಕಳೆದರೂ ಆರೋಪಿಯ ಬಂಧನವಾಗಿಲ್ಲ. ಶೀಘ್ರವೇ ಆರೋಪಿಯನ್ನು ಬಂಧಿಸಬೇಕು. ಇಲ್ಲವಾದಲ್ಲಿ ನ.22ರಿಂದ ಪುತ್ತೂರು ಮಹಿಳಾ ಠಾಣೆಯ ಎದುರು ಅನಿರ್ದಿಷ್ಠಾವಧಿ ಧರಣಿ ನಡೆಸಲಾಗುವುದು ಎಂದು 7 ದಲಿತ ಸಂಘಟನೆಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.

ಅಂಬೇಡ್ಕರ್ ರಕ್ಷಣಾ ವೇದಿಕೆ ಅಧ್ಯಕ್ಷ ಸುಂದರ ಪಾಟಾಜೆ ಮಾತನಾಡಿ, ರಾಜು ಹೊಸ್ಮಠ ಅವರಿಂದ ಸುಮಾರು 20 ಹೆಣ್ಣು ಮಕ್ಕಳು ನೊಂದಿರುವ ಕುರಿತು ನಮ್ಮ ಸಂಘಟನೆಗೆ ಮೌಖಿಕವಾಗಿ ದೂರು ನೀಡಿದ್ದಾರೆ. ಅವರ್ಯಾರು ಎದುರಿಗೆ ಬಂದು ತಮಗಾದ ಅನ್ಯಾಯ ಹೇಳಲು ಬಯಸುತ್ತಿಲ್ಲ. ಈ ನಿಟ್ಟಿನಲ್ಲಿ ಆರೋಪಿಯನ್ನು ಬಂಧಿಸುವ ತನಕ ನಮ್ಮ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದಲಿತ ಸೇವಾ ಸಮಿತಿ ಉಪಾಧ್ಯಕ್ಷ ಮನೋಹರ್ ಕೋಡಿಜಾಲ್, ಕೇಶವ ಪಡೀಲ್, ವಿಶ್ವನಾಥ್ ಅಲೆಕ್ಕಾಡಿ ಮಕದಲಾದವರು ಉಪಸ್ಥಿತರಿದ್ದರು.

Scroll to Top