ಮಣಿಪಾಲದ ಯುವತಿಗೆ ಹೊಸ ತೋಳಿನ ಜೋಡಣೆ ► ಕೊಚ್ಚಿಯ ಅಮೃತಾ ವೈದ್ಯ ವಿಜ್ಞಾನ ಸಂಸ್ಥೆಯ ಸಾಧನೆ

(ನ್ಯೂಸ್ ಕಡಬ) newskadaba.com ಕೊಚ್ಚಿ,ಸೆ.29. ರಸ್ತೆ ಅಪಘಾತದಲ್ಲಿ ಎರಡು ಕೈಗಳನ್ನು ಕಳೆದುಕೊಂಡ ಯುವತಿಗೆ ಯುವಕನ ತೋಳನ್ನು ಕಸಿ ಮಾಡಿ ಜೋಡಿಸಿದ ಅಪರೂಪದ ಸಾಧನೆಯನ್ನು ಕೇರಳದ ಕೊಚ್ಚಿಯ ಅಮೃತಾ ವೈದ್ಯ ವಿಜ್ಞಾನ ಸಂಸ್ಥೆಯ ವೈಧ್ಯರಿಂದ ನಡೆದಿದೆ.

ಮಣಿಪಾಲದ 19 ವರ್ಷದ ಎಂಜಿನಿಯರ್ ವಿದ್ಯಾರ್ಥಿನಿ ಕಳೆದ ವರ್ಷ ರಸ್ತೆ ಅಪಘಾತವೊಂದರಲ್ಲಿ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದಳು.

ಪ್ಲಾಸ್ಟಿಕ್ ಮತ್ತು ಪುನಃ ನಿರ್ಮಾಣದ ಸರ್ಜರಿ ಇಲಾಖೆಯ ಮುಖ್ಯಸ್ಥರಾದ ಡಾ. ಸುಬ್ರಹ್ಮಣ್ಯ ಅಯ್ಯರ್ ನೇತೃತ್ವದಲ್ಲಿ ಸುಮಾರು 20 ವೈದ್ಯರು ಮತ್ತು 16 ಅರವಳಿಕೆ ತಜ್ಞರು ಸೇರಿ ಸುಮಾರು 13 ಗಂಟೆಗಳ ಕಾಲ ಈ ಆಪರೇಷನ್ ಮಾಡಿದ್ದಾರೆ. ಹುಡುಗನ ತೋಳುಗಳನ್ನು ಇದೇ ಪ್ರಥಮ ಬಾರಿಗೆ ಯುವತಿಗೆ ಜೋಡಿಸಲಾಗಿದೆ. ವಿಶ್ವದಲ್ಲಿ 9 ಕಸಿಗಳು ನಡೆದಿದ್ದು, ಇದೇ ಮೊದಲ ಬಾರಿಗೆ ಏಷ್ಯಾದಲ್ಲಿ ಮಾಡಿರುವ ಆಪರೇಷನ್ ಇದಾಗಿದೆ.

ಪುಣೆಯ ಟಾಟಾ ಮೋಟರ್ಸ್ ಕಂಪೆನಿಯ ಹಿರಿಯ ವ್ಯವಸ್ಥಾಪಕರಾದ ಫಕೀರಗೌಡ ಮತ್ತು ಸುಮಾ ನುಗ್ಗಿಹಳ್ಳಿ ದಂಪತಿಯ ಪುತ್ರಿ ಶ್ರೇಯಾ ಸಿದ್ದನಗೌಡ ಮಣಿಪಾಲ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಮಿಕಲ್ ಎಂಜಿನಿಯರ್ ವ್ಯಾಸಂಗ ಮಾಡುತ್ತಿದ್ದಳು. ಪುಣೆಯಿಂದ ಮಣಿಪಾಲಕ್ಕೆ ಬಸ್‍ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಬಸ್ ಕೆಳಗಡೆ ಸಿಲುಕೊಂಡಿದ್ದ ಶ್ರೇಯಾ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದಳು.

 

ಶ್ರೇಯಾಗೆ ಕೈಗಳನ್ನು ದಾನ ಮಾಡಿದ ವ್ಯಕ್ತಿ ಸಚಿನ್ (20). ಎರ್ನಾಕುಲಂನ ರಾಜಗಿರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸಚಿನ್ ರಸ್ತೆ ಅಪಘಾತ ಉಂಟಾಗಿ ತೀವ್ರವಾಗಿ ಗಾಯಗೊಂಡಿದ್ದ. ಈತನ ಬ್ರೈನ್ ಡೆಡ್ ಆಗಿದ್ದ ಕಾರಣ ಸಚಿನ್ ಪೋಷಕರು ಕೈಗಳನ್ನು ದಾನ ಮಾಡಲು ಅನುಮತಿ ನೀಡಿದ್ದರು. ಅನುಮತಿ ಸಿಕ್ಕಿದ ಕಾರಣ ಆತನ ತೋಳುಗಳನ್ನೇ ಶ್ರೇಯಾಗೆ ಈಗ ಯಶಸ್ವಿಯಾಗಿ ಜೋಡಿಸಲಾಗಿದೆ.

ಕಸಿ ಮಾಡಿದ ಶ್ರೇಯಾಳ ಕೈಗಳಲ್ಲಿ ಉತ್ತಮ ಚೇತರಿಕೆ ಲಕ್ಷಣಗಳು ಕಂಡುಬರುತ್ತಿವೆ. ಪ್ರಸ್ತುತ ಶ್ರೇಯಾಳ ಬೆರಳುಗಳು, ಮಣಿಕಟ್ಟುಗಳು ಹಾಗೂ ಭುಜಗಳು ಚಲನೆಯಾಗುತ್ತಿವೆ. ಮುಂದಿನ ಒಂದುವರೆ ವರ್ಷದಲ್ಲಿ ಶೇ.85 ರಷ್ಟು ಚಲನೆಯನ್ನು ಕಾಣಬಹುದು ಎಂದು ವೈದ್ಯರು ಹೇಳಿದ್ದಾರೆ.

ಮುಂದಿನ ವರ್ಷ ನಾನು ಎಲ್ಲರಂತೆ ಸಾಮಾನ್ಯ ಜೀವನ ನಡೆಸುತ್ತೇನೆ ಎಂಬ ಭರವಸೆ ಇದೆ ಎಂದು ಶ್ರೇಯಾ ಸಂತಸ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅಮೃತಾ ಇನ್ಸ್ ಟಿಟ್ಯೂಟ್ ಇಂತಹ ಶಸ್ತ್ರಚಿಕಿತ್ಸೆಯನ್ನು ಮಾಡಿ ಯಶಸ್ವಿಯಾಗಿದೆ.

 

error: Content is protected !!

Join the Group

Join WhatsApp Group