ನೆಟ್ಟಣ: ಎಟಿಎಂ ದರೋಡೆಗೆ ವಿಫಲ ಯತ್ನ ► ಕಟ್ಟಡ ಮಾಲಕರ ಸಮಯ ಪ್ರಜ್ಞೆಯಿಂದ ಕಳ್ಳರು ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಸೆ.16. ಇಲ್ಲಿನ ಬಿಳಿನೆಲೆ ಗ್ರಾಮದ ನೆಟ್ಟಣ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜಯ ಬ್ಯಾಂಕ್ ನ ಎಟಿಎಂಗೆ ನುಗ್ಗಿದ ಕಳ್ಳರು ಕಟ್ಟಡ ಮಾಲಕರ ಸಮಯಪ್ರಜ್ಞೆಯಿಂದ ಪರಾರಿಯಾದ ಘಟನೆ ಶನಿವಾರ ಬೆಳಗ್ಗಿನ ಜಾವ ನಡೆದಿದೆ.

ವಿಜಯ ಬ್ಯಾಂಕ್ ಎಟಿಎಂ ನಲ್ಲಿ ಸೆಕ್ಯೂರಿಟಿ ಗಾರ್ಡ್ ಇಲ್ಲದ ಸಮಯ ನೋಡಿ ತಂಡವೊಂದು ಕಳ್ಳತನ ನಡೆಸಲು ಎಟಿಎಂ ಒಳನುಗ್ಗಿದೆ. ಸಿಸಿ ಕ್ಯಾಮರಾ ಹಾಗೂ ಸೈರನ್ ಕನೆಕ್ಷನ್ ತಪ್ಪಿಸಿರುವ ಕಳ್ಳರು ಎಟಿಎಂ ಯಂತ್ರವನ್ನು ಒಡೆಯುವ ವೇಳೆ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಕಟ್ಟಡದ ಮೇಲಿನ ಮಹಡಿಯ ತನ್ನ ಮನೆಯಲ್ಲಿದ್ದ ಕಟ್ಟಡ ಮಾಲೀಕರಾದ ಸುಧೀರ್ ಕುಮಾರ್ ರವರು ಹೊರಬಂದು ಲೈಟ್ ಹಾಕಿದಾಗ ಕಳ್ಳರು‌ ಟಾಟಾ ಸುಮೋ ಹತ್ತಿ ಪರಾರಿಯಾಗಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕಡಬ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

Scroll to Top