ಬಸ್ ಢಿಕ್ಕಿ ಹೊಡೆದು ಬೈಕ್ ಸವಾರಿಬ್ಬರು ಮೃತ್ಯು

ಬೆಂಗಳೂರು, ಮಾ.2: ಬೈಕ್‌ಗೆ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಬೆಳಗ್ಗಿನ ಜಾವ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ನಗರದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಕೂಳೂರು ನಿವಾಸಿ ಸಚಿನ್(24) ಹಾಗೂ ಪ್ರತಾಪ್(24) ಎಂದು ಗುರುತಿಸಲಾಗಿದೆ.

ಸ್ನೇಹಿತರಾಗಿದ್ದ ಇವರಿಬ್ಬರೂ ತಮ್ಮ ಗ್ರಾಮಕ್ಕೆ ಹೋಗಲು ಮಂಗಳವಾರಪೇಟೆ ಬಳಿ ಪೆಟ್ರೋಲ್ ಹಾಕಿಸಿಕೊಂಡು ಬುಲೆಟ್ ಬೈಕ್‌ನಲ್ಲಿ ಮುಂಜಾನೆ 4:30ರ ಸುಮಾರಿಗೆ ಮಂಗಳವಾರಪೇಟೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದಾಗ ಅತಿವೇಗವಾಗಿ ಬಂದ ಬಸ್ ಢಿಕ್ಕಿ ಹೊಡೆದಿದೆನ್ನಲಾಗಿದೆ. ಅಪಘಾತದ ಬಳಿಕ ಬಸ್ ಚಾಲಕ ಬಸ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ವಿಷಯ ತಿಳಿದು ಚನ್ನಪಟ್ಟಣ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Scroll to Top