ಕಡಬ: ವಿದ್ಯುತ್ ಆಘಾತಕ್ಕೆ ಒಳಗಾಗಿ ಯುವಕ ಮೃತ್ಯು ➤ ಮನೆಯಲ್ಲಿ ಲೈಟ್ ಉರಿಸಲೆಂದು ಸ್ವಿಚ್ ಹಾಕುತ್ತಿದ್ದ ವೇಳೆ ಘಟನೆ

(ನ್ಯೂಸ್ ಕಡಬ) newskadaba.com ಕಡಬ, ಜು.06. ಎಚ್.ಟಿ. ವಿದ್ಯುತ್ ಮಾರ್ಗದ ತಂತಿಯು ಎಲ್.ಟಿ. ತಂತಿಗೆ ತಾಗಿದ ಪರಿಣಾಮ ಉಂಟಾದ ವಿದ್ಯುತ್ ಆಘಾತಕ್ಕೆ ಯುವಕನೋರ್ವ ಬಲಿಯಾದ ಘಟನೆ ಐತ್ತೂರು ಗ್ರಾಮದ ಸುಂಕದಕಟ್ಟೆ ಸಮೀಪದ ನೆಲ್ಲಿಕಟ್ಟೆ ಎಂಬಲ್ಲಿ ಶನಿವಾರದಂದು ಮುಂಜಾನೆ ಸಂಭವಿಸಿದೆ.

ಮೃತ ಯುವಕನನ್ನು ನೆಲ್ಲಿಕಟ್ಟೆ ಕಾಲನಿ ನಿವಾಸಿ ಜಯರಾಮ ಎಂಬವರ ಪುತ್ರ ಮೋಹನ್(32) ಎಂದು ಗುರುತಿಸಲಾಗಿದೆ. ಮೋಹನ್ ಎಂದಿನಂತೆ ಶನಿವಾರ ಮುಂಜಾನೆ ಎದ್ದು ತನ್ನ ಮನೆಯ ಲೈಟ್ ಉರಿಸಲೆಂದು ಸ್ವಿಚ್ ಹಾಕುತ್ತಿದ್ದ ವೇಳೆ ವಿದ್ಯುತ್ ಆಘಾತಕ್ಕೆ ಒಳಗಾಗಿ ಕೆಳಕ್ಕೆಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟರೆನ್ನಲಾಗಿದೆ. ವಿದ್ಯುತ್ ಆಘಾತದಿಂದಾಗಿ ಮನೆಯ ಸ್ವಿಚ್ ಬೋರ್ಡ್ ಸುಟ್ಟು ಕರಕಲಾಗಿದ್ದು, ವಿದ್ಯುತ್ ಪ್ರವಹಿಸಿದ್ದರಿಂದ ಪರಿಸರದ ಹಲವು ಮನೆಗಳಿಗೂ ಹಾನಿಯಾಗಿವೆ.

ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದ್ದು, ಸ್ಥಳಕ್ಕೆ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್ ಪೂಜಾರಿ, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್, ಮೆಸ್ಕಾಂ ಜೆಇ, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Scroll to Top