ಕಾಸರಗೋಡು : ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ – ಅದೃಷ್ಟವಶಾತ್‌ ಚಾಲಕ ಪಾರು

(ನ್ಯೂಸ್‌ ಕಡಬ) newskadaba.com, ಸೆ. 19 . ಚಲಿಸುತ್ತಿದ್ದ ಮಾರುತಿ ಕಾರೊಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ವಾಹನ ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಕಾಸರಗೋಡಿನ ನೆಲ್ಲಿಕಟ್ಟೆ ರಸ್ತೆಯ ಅದ್ರುಂಗುಳಿ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಅದ್ರುಂಗುಳಿ ರಸ್ತೆಯಲ್ಲಿ ಕಾರು ಚಲಿಸುತ್ತಿದ್ದ ವೇಳೆ ಇಂಜಿನ್‌ನಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಅಶ್ರಫ್ ಅವರು ತಕ್ಷಣ ಬ್ರೇಕ್ ಹಾಕಿ ಕಾರನ್ನು ನಿಲ್ಲಿಸಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಬ್ರೇಕ್ ಕೈಕೊಟ್ಟಿದೆ ಎನ್ನಲಾಗಿದೆ. ಬ್ರೇಕ್ ವಿಫಲವಾದ ಪರಿಣಾಮ ಕಾರು ಹಿಂದಕ್ಕೆ ಚಲಿಸಿ ರಸ್ತೆ ಬದಿಯ ಕಾಂಕ್ರೀಟ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ತಕ್ಷಣವೇ ಚಾಲಕ ಸೀಟ್‌ಬೆಲ್ಟ್‌ ಬಿಚ್ಚಿ ಕಾರಿನಿಂದ ಹೊರಗೆ ಜಿಗಿದಿದ್ದಾರೆ. ಇದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ.

ಚಾಲಕ ಹೊರಬಂದ ಕೆಲವೇ ಕ್ಷಣಗಳಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆ ವಾಹನ ಸಂಪೂರ್ಣವಾಗಿ ಸುಟ್ಟುಹೋಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಾಸರಗೋಡು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರಿಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Scroll to Top