ದೀಪಕ್ ರಾವ್ ಕೊಲೆ‌ ಪ್ರಕರಣ ► ತಲೆಮರೆಸಿಕೊಂಡಿದ್ದ ಆರೋಪಿಯ‌ ಬಂಧನ



(ನ್ಯೂಸ್ ಕಡಬ) newskadaba.com ಮಂಗಳೂರು, ಜು.17. ಈ ವರ್ಷಾರಂಭದಲ್ಲಿ ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ.







ಬಂಧಿತ ಆರೋಪಿಯನ್ನು ಕೃಷ್ಣಾಪುರ 4 ನೇ ಬ್ಲಾಕ್ ಬದ್ರಿಯಾ ಜುಮಾ ಮಸೀದಿ ಬಳಿಯ ನಿವಾಸಿ ದಿ| ಇಸ್ಮಾಯಿಲ್ ಎಂಬವರ ಪುತ್ರ ಸಫ್ವಾನ್ ಯಾನೆ ಚಪ್ಪು ಎಂದ ಗುರುತಿಸಲಾಗಿದೆ. ಸುರತ್ಕಲ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ 2 ನೇ ಬ್ಲಾಕ್ ನ ಅಬ್ದುಲ್ ಮಜೀದ್ ಎಂಬವರ ಮನೆಯ ಎದುರು ಅವರ ಮೊಬೈಲ್ ಅಂಗಡಿಯ ಕರೆನ್ಸಿಯ ಹಣವನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ದೀಪಕ್ ರಾವ್ (30) ಎಂಬಾತನನ್ನು ಹಾಡುಹಗಲೇ ಬರ್ಬರವಾಗಿ ಕೊಲೆಗೈಯಲಾಗಿತ್ತು. ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ 12 ಮಂದಿಯನ್ನು ಈಗಾಗಲೇ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.






ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಸುರತ್ಕಲ್ ಮುಕ್ಕ ಬಳಿ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಪ್ರಕರಣದ ತನಿಖಾಧಿಕಾರಿಯವರಾದ ಸಂಚಾರ ಉಪವಿಭಾಗದ ಎಸಿಪಿ ಮಂಜುನಾಥ ಶೆಟ್ಟಿಯವರಿಗೆ ಹಸ್ತಾಂತರಿಸಿದ್ದಾರೆ. ಆರೋಪಿಯ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಶಾಂತಾರಾಮ, ಪಿಎಸ್ಐಗಳಾದ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

error: Content is protected !!
Scroll to Top