(ನ್ಯೂಸ್ ಕಡಬ) newskadaba.com ಸೆ. 02 ಪುತ್ತೂರು ಶಾಸಕರ ಕಚೇರಿಯಲ್ಲಿ ಪ್ರತಿ ಸೋಮವಾರ ನಡೆಯುವ ‘ಜನಸ್ಪಂದನಾ’ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಮಧ್ಯಾಹ್ನದ ‘ಗಂಜಿ ಊಟ’ದ ವ್ಯವಸ್ಥೆ ಆರಂಭಿಸಿದ್ದಾರೆ.
ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಲ್ಲುವ ಬಡವರು, ವೃದ್ಧರು ಹಾಗೂ ದೂರದ ಊರುಗಳಿಂದ ಬರುವ ಜನರು ಊಟವಿಲ್ಲದೆ ಸಂಕಷ್ಟಪಡುವುದನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜನರ ಅಹವಾಲುಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಜೊತೆಗೆ, ಗಂಟೆಗಟ್ಟಲೆ ಕಾಯುವ ಸಾರ್ವಜನಿಕರ ಹಸಿವನ್ನು ನೀಗಿಸುವ ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.








