ಕಡಬ ತಾಲೂಕಿನ ಮೂರು ಗ್ರಾ.ಪಂ ಕಚೇರಿಗಳಿಗೆ ಲೋಕಾಯುಕ್ತ ದಿಢೀರ್ ದಾಳಿ ದಿಢೀರ್ ದಾಳಿಯಿಂದ ಅಧಿಕಾರಿಗಳು ತತ್ತರ



 

(ನ್ಯೂಸ್‌ ಕಡಬ) newskadaba.com, ಸೆ.01: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮ ಪಂಚಾಯಿತಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಹಲಾಮೂರ್ತಿ ರಾವ್ ನೇತೃತ್ವದ ತಂಡದಿಂದ ದಾಖಲೆಗಳ ಪರಿಶೀಲನೆ. ಕಡಬ ತಾಲೂಕಿನ ಪ್ರಮುಖ ಗ್ರಾಮ ಪಂಚಾಯಿತಿಗಳಾದ ನೆಲ್ಯಾಡಿ, ಶಿರಾಡಿ ಹಾಗೂ ಮರ್ದಾಳ ಪಂಚಾಯಿತಿ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ, ಕಡತಗಳು ಹಾಗೂ ದಾಖಲೆಗಳ ತೀವ್ರ ಪರಿಶೀಲನೆ ಕೈಗೊಂಡಿದ್ದಾರೆ. ಸಾರ್ವಜನಿಕ ದೂರುಗಳು ಹಾಗೂ ಆಡಳಿತಾತ್ಮಕ ಅವ್ಯವಹಾರಗಳ ಶಂಕೆಯ ಹಿನ್ನೆಲೆಯಲ್ಲಿ ಈ ಮಹತ್ವದ ಕಾರ್ಯಾಚರಣೆ ನಡೆದಿದೆ.







ಲೋಕಾಯುಕ್ತ ಅಧಿಕಾರಿಗಳ ಪ್ರತ್ಯೇಕ ತಂಡಗಳು ಮಂಗಳವಾರ ಬೆಳಿಗ್ಗೆ ಏಕಕಾಲದಲ್ಲಿ ನೆಲ್ಯಾಡಿ, ಶಿರಾಡಿ ಹಾಗೂ ಮರ್ದಾಳ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ತೆರಳಿ ದಿಢೀರ್ ತಪಾಸಣೆ ಆರಂಭಿಸಿವೆ. ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುದಾನ ಬಳಕೆ, ನರೇಗಾ ಕಾಮಗಾರಿಗಳ ಬಿಲ್ ಪಾವತಿ, ಸಾರ್ವಜನಿಕ ಅರ್ಜಿಗಳ ವಿಲೇವಾರಿ, ಕಟ್ಟಡ ನಿರ್ಮಾಣ ಪರವಾನಗಿ, ಖಾತಾ ಬದಲಾವಣೆ ಹಾಗೂ ಕಚೇರಿ ಹಾಜರಾತಿ ಪುಸ್ತಕಗಳನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ.






ಕಚೇರಿಯಲ್ಲಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಲೋಕಾಯುಕ್ತ ತಂಡ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದೆ.ನೆಲ್ಯಾಡಿ ಗ್ರಾಮ ಪಂಚಾಯಿತಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಹಲಾಮೂರ್ತಿ ರಾವ್ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದ್ದು, ತಂಡದಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ನಾಗರಾಜ್, ಪ್ರಸನ್ನ, ಸುದೀಪ್ ಹಾಗೂ ಜಲಾಲ್ ಭಾಗವಹಿಸಿದ್ದಾರೆ.

ಉಳಿದಂತೆ ಶಿರಾಡಿ ಹಾಗೂ ಮರ್ದಾಳ ಗ್ರಾಮ ಪಂಚಾಯಿತಿಗಳಲ್ಲೂ ಪ್ರತ್ಯೇಕ ತಂಡಗಳು ದಾಖಲೆಗಳ ಪರಿಶೀಲನೆಯನ್ನು ಮುಂದುವರಿಸಿದೆ. ಲೋಕಾಯುಕ್ತರ ಈ ದಿಢೀರ್ ದಾಳಿಯಿಂದಾಗಿ ತಾಲೂಕಿನ ಇತರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದಲ್ಲಿ ಭಾರಿ ಸಂಚಲನ ಮೂಡಿದೆ…

error: Content is protected !!
Scroll to Top