(ನ್ಯೂಸ್ ಕಡಬ) newskadaba.com ಆ. 27. ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಪ್ರತಿ ನಗರ ವಾರ್ಡ್ಗಳ ವ್ಯಾಪ್ತಿಯಲ್ಲಿ ‘ಭಾರತ್ ಜೋಡೋ ಯುವ ಸಂಘ‘ಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ. ಇದು ಯುವಜನರ ಬದಲಾವಣೆಯ ಭಾಗವಾಗಿ ಯುವ ಶಕ್ತಿ, ಕನಸುಗಳು ಮತ್ತು ಕರ್ನಾಟಕ ರಾಜ್ಯದ ಉತ್ತಮ ಭವಿಷ್ಯಕ್ಕಾಗಿ ಈ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದರಲ್ಲಿ ರಾಜ್ಯದ ಎಲ್ಲ ವರ್ಗ, ಧರ್ಮ, ಜಾತಿ, ಮತ, ಪಂಗಡಕ್ಕೆ ಸೇರಿದ 16 ರಿಂದ 35 ವರ್ಷ ವಯೋಮಿತಿಯೊಳಗಿನ ಯುವಕ ಹಾಗೂ ಯುವತಿಯರು ಆನ್ಲೈನ್ ಆ್ಯಪ್ ಮೂಲಕ ನೋಂದಾಯಿಸಬಹುದು.
ಈ ಯೋಜನೆಯು ಕರ್ನಾಟಕ ಸರ್ಕಾರದ ಒಂದು ಮಹತ್ವಾಕಾಂಕ್ಷೆ ಮತ್ತು ಹೊಸ ಧೈಯೋದೇಶ ಹೊಂದಿರುವ ವಿನೂತನ ಯೋಜನೆಯಾಗಿದ್ದು, ಯೋಜನೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಕೌಶಲ್ಯ, ಆರೋಗ್ಯ, ಪರಿಸರ ಹೀಗೆ ಇನ್ನೂ ಮುಂತಾದ ಕಾರ್ಯಚಟುವಟಿಕೆಗಳನ್ನು ಯುವ ಸಂಘಟನೆಗಳ ಮೂಲಕ ಕೈಗೊಂಡು ರಾಜ್ಯದ ಯುವಕರು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಸಲುವಾಗಿ ಸರ್ಕಾರದ ವತಿಯಿಂದ ಪ್ರತಿ ಸಂಘಕ್ಕೆ ರೂ. 10 ಲಕ್ಷಗಳ ಅನುದಾನ ನೀಡಿ ಪ್ರೋತ್ಸಾಹ ನೀಡಲಾಗುತ್ತದೆ.
ಆದುದರಿಂದ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 16ರಿಂದ 35ರ ವಯೋಮಾನದ ಯುವಕ/ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸದರಿ ಯೋಜನೆಯಲ್ಲಿ ಆನ್ಲೈನ್ ಅಧಿಕೃತ ವೆಬ್ಸೈಟ್ https://bjys.karnataka.gov.in ಮೂಲಕ ನೋಂದಾಯಿಸಿಕೊಂಡು ಸಂಘಗಳ ರಚನೆ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯುವ ಕರ್ನಾಟಕ ಮತ್ತು ನವ ಭಾರತದ ನಿರ್ಮಾಣವನ್ನು ಜೊತೆಯಾಗಿ ನಿರ್ಮಿಸಲು ಸಹಕರಿಸಬೇಕು.
ಹೆಚ್ಚಿನ ಮಾಹಿತಿಗೆ ಮಂಗಳೂರು ಮಹಾನಗರಪಾಲಿಕೆ ಕಛೇರಿ ಅಥವಾ ವಲಯಗಳ ಆಯುಕ್ತರ ಕಛೇರಿ (ಸಹಾಯವಾಣಿ ಸಂಖ್ಯೆ 6364265566 ಸಂಪರ್ಕಿಸಬಹುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








