(ನ್ಯೂಸ್ ಕಡಬ) newskadaba.com, ಜು.27 ಅಕ್ಕಿ, ತುಪ್ಪ ಸೇರಿದಂತೆ ನಿತ್ಯಬಳಕೆಯ ದಿನಸಿ ವಸ್ತುಗಳ ದರ ಏರಿಕೆಯ ಬೆನ್ನಲ್ಲೇ, ಇದೀಗ ಅಡುಗೆಗೆ ಬಳಸುವ ಪ್ರಮುಖ ಮಸಾಲೆ ಪದಾರ್ಥಗಳ ಬೆಲೆಯೂ ಹೆಚ್ಚಳವಾಗಿದ್ದು, ಮಧ್ಯಮ ವರ್ಗದ ಕುಟುಂಬಗಳಿಗೆ ಹೊರೆಯಾಗಿದೆ.
ಸಾಗಾಣಿಕೆ ವೆಚ್ಚ ಹೆಚ್ಚಾಗಿರುವುದು, ಕೆಲವು ಮಸಾಲೆ ಬೆಳೆಗಳ ಉತ್ಪಾದನೆ ಕುಸಿತ ಹಾಗೂ ಮಾರುಕಟ್ಟೆಯಲ್ಲಿ ಸರಬರಾಜು ಕಡಿಮೆಯಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಏಲಕ್ಕಿ ದರ ಪ್ರತಿ ಕೆ.ಜಿ.ಗೆ ₹3,800 ರಿಂದ ₹4,300 ಕ್ಕೆ ಏರಿಕೆಯಾಗಿದ್ದರೆ, ಲವಂಗದ ಬೆಲೆ ₹600 ರಿಂದ ₹900 ಕ್ಕೆ ಮತ್ತು ಬಾದಾಮಿ ದರ ₹800 ರಿಂದ ₹1,000 ಕ್ಕೆ ತಲುಪಿದೆ. ಹಾಗೆಯೇ ಒಣ ಮೆಣಸಿನಕಾಯಿ ಬೆಲೆ ₹230 ರಿಂದ ₹320 ಕ್ಕೆ ಹಾಗೂ ಜೀರಿಗೆ ಬೆಲೆ ₹160 ರಿಂದ ₹260 ಕ್ಕೆ ಏರಿದೆ. ಉಳಿದಂತೆ ಧನಿಯಾ ದರ ₹160 ರಿಂದ ₹220, ಚಕ್ಕೆ ₹170 ರಿಂದ ₹240, ಹುಣಸೆಹಣ್ಣು ₹140 ರಿಂದ ₹170 ಹಾಗೂ ಸಾಸಿವೆ ಮತ್ತು ಮೆಂತೆ ಕಾಳುಗಳ ದರ ಪ್ರತಿ ಕೆ.ಜಿ.ಗೆ ₹80 ರಿಂದ ₹100 ಕ್ಕೆ ಹೆಚ್ಚಳವಾಗಿದೆ.









