ಅಪಘಾತ ಸಂತ್ರಸ್ತರಿಗೆ ಪಿ.ಎಂ ರಾಹತ್ ಯೋಜನೆ ಆಸರೆ- ಡಿ.ಹೆಚ್.ಒ



(ನ್ಯೂಸ್ ಕಡಬ) newskadaba.com ಜು. 24. ಬದಲಾಗುವ ಆಧುನಿಕ ಜೀವನ ಶೈಲಿಯಲ್ಲಿ ರಸ್ತೆ ಅಪಘಾತಗಳು ದಿನೆದಿನೇ ಹೆಚ್ಚಾಗುತ್ತಿದ್ದು, ವಾಹನಗಳ ಸಂಖ್ಯೆ, ವೇಗದ ವಾಹನ ಚಾಲನೆ, ಯಾಂತ್ರಿಕ ಸರವೇಗದ ಜೀವನದಿಂದಾಗಿ, ಸಾವು ನೋವು ಸರ್ವೆ ಸಾಮಾನ್ಯವಾಗಿದೆ, ಇಂತಹ ಸಂದರ್ಭದಲ್ಲಿ ರಸ್ತೆ ಅಪಘಾತ ಸಂಭವಿಸಿದ ತಕ್ಷಣಕ್ಕೆ ನಗದು ರಹಿತ ಚಿಕಿತ್ಸೆಗಾಗಿ  ರೂ. 1.5 ಲಕ್ಷ ಅನುದಾನ ಪ್ಯಾಕೇಜ್‍ನೊಂದಿಗೆ 24 ಗಂಟೆಯೊಳಗೆ, ಜೀವನ್ಮರಣ ಸ್ಥಿತಿಯಲ್ಲಿ 48 ಗಂಟೆಯೊಳಗೆ ಈ ಯೋಜನೆ ಮೂಲಕ ವಿಳಂಬಕ್ಕೆ ಆಸ್ಪದ ಕೊಡದೆ ಚಿಕಿತ್ಸೆ ನೀಡುವುದಾಗಿದೆ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಆರ್ ತಿಮ್ಮಯ್ಯ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ  ವೆನ್‍ಲಾಕ್ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ವೆನ್‍ ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ ಸಭಾಂಗಣದಲ್ಲಿ ನಡೆದ ಪಿ.ಎಂ ರಾಹತ್  ಯೋಜನೆಯ ಕುರಿತು ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಆಸ್ಪತ್ರೆಗಳಿಗೆ “e-ಆಂಖನಮೂದು ಕಡ್ಡಾಯ: ಯೋಜನೆಯ ಸೌಲಭ್ಯವು ಅಪಘಾತಕ್ಕೊಳಗಾದ ಸಂತ್ರಸ್ತರಿಗೆ ವಿಳಂಬವಿಲ್ಲದೆ ತಲುಪಲು ಆಸ್ಪತ್ರೆಗಳಿಗೆ ಪ್ರಮುಖ ನಿಯಮಾವಳಿಯನ್ನು ರೂಪಿಸಲಾಗಿದೆ. ರಸ್ತೆ ಅಪಘಾತಕ್ಕೊಳಗಾದ ಗಾಯಾಳುಗಳನ್ನು ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ತಕ್ಷಣ, ಆಸ್ಪತ್ರೆಯವರು 24 ಗಂಟೆಗಳ ಒಳಗೆ “e-DAR” (Electronic Detailed Accident Report) ಪೋರ್ಟಲ್‍ ನಲ್ಲಿ ಕಡ್ಡಾಯವಾಗಿ ಮಾಹಿತಿ ನಮೂದಿಸಬೇಕು.







 

ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಮನ್ವಯ: ಆಸ್ಪತ್ರೆಯವರು ನೀಡಿದ ಇ-ಡಾರ್ ಮಾಹಿತಿಯನ್ನು ಪೊಲೀಸ್ ಇಲಾಖೆಯು ಪರಿಶೀಲಿಸಿ ಅನುಮೋದಿಸಿದ ತಕ್ಷಣ, ಆ ಮಾಹಿತಿಯು TMS-2 ಪೋರ್ಟಲ್‍ ಗೆ ರವಾನೆಯಾಗಿ ರೋಗಿಯ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಭರಿಸಲ್ಪಡುತ್ತದೆ.
ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯವರು 24 ರಿಂದ 48 ಗಂಟೆಗಳ ಒಳಗೆ ಇ-ಡಾರ್ ದಾಖಲಿಸದಿದ್ದರೆ, ಅರ್ಹ ಸಂತ್ರಸ್ತರು ಯೋಜನೆಯ ಉಚಿತ ಚಿಕಿತ್ಸಾ ಸೌಲಭ್ಯದಿಂದ ವಂಚಿತರಾಗುವ ಅಪಾಯವಿರುತ್ತದೆ. ಹಾಗಾಗಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳು ಇದನ್ನು ಕಡ್ಡಾಯವಾಗಿ ಪಾಲಿಸಿ, ಯೋಜನೆಯ ಯಶಸ್ವಿ ಅನುಷ್ಠಾನ ಮಾಡಲು ಸೂಚಿಸಿದರು.
ಸಹಾಯಕ ಪೊಲೀಸ್ ಆಯುಕ್ತೆ (ಟ್ರಾಫಿಕ್) ನಜ್ಮಾ ಫಾರೂಕಿ  ಮಾತನಾಡಿ, ಪಿ.ಎಂ ರಾಹತ್ ಯೋಜನೆಯು ರಸ್ತೆ ಅಪಘಾತ ಹೊಂದಿರುವ (ವ್ಯಕ್ತಿಗಳಿಗೆ) ಸಂತ್ರಸ್ತರಿಗೆ ಜೀವ ಉಳಿಸುವ ಉದ್ದೇಶದೊಂದಿಗೆ ತಕ್ಷಣಕ್ಕೆ ಅಲ್ಲಿಯೇ ಇರುವ ಆಸ್ಪತ್ರೆಗಳಿಗೆ ದಾಖಲಿಸಿ ನಗದು ರಹಿತ ಚಿಕಿತ್ಸೆಯೊಂದಿಗೆ, ಸಂತ್ರಸ್ತರ ರಕ್ಷಣೆಗೆ ಅನುಕೂಲವಾಗುತ್ತಿದೆ. ಹೆಚ್ಚಿನ ರಸ್ತೆ ಅಪಘಾತಗಳಲ್ಲಿ ಪಾದಚಾರಿ/ ಬೈಕ್ ಸವಾರರು ಬಲಿಯಾಗುತ್ತಿದ್ದು, ಇವರೆಲ್ಲರೂ ಬಡತನ ರೇಖೆಯಲ್ಲಿರುವುದರಿಂದ ಈ ಯೋಜನೆ ಮೂಲಕ ಕುಟುಂಬದವರಿಗೆ ಸಾಂತ್ವನ ನೀಡಲು ಅನುಕೂಲವಾಗಿದೆ ಎಂದರು.
ಐ.ಎಂ.ಎ ಅಧ್ಯಕ್ಷ ಡಾ.ಸದಾನಂದ ಪೂಜಾರಿ ಮಾತನಾಡಿ, ಈ ಯೋಜನೆಯ ಯಶಸ್ವಿಯಾಗಲು ಸರಕಾರ ಸರಳೀಕರಣಗೊಳಿಸಬೇಕು. ಯಾವುದೇ ಯೋಜನೆ ಸರಕಾರಿ ಆಸ್ಪತ್ರೆ/ ಖಾಸಗಿ ಆಸ್ಪತ್ರೆಗಳಿಗೆ ಹೊರೆಯಾಗದಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ  ವೆನ್‍ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್ ಡಿ.ಎಸ್ ಮಾತನಾಡಿ, ಕೇಂದ್ರ ಸರ್ಕಾರದ ಈ ಯೋಜನೆ ಅರ್ಹ ಸಂತ್ರಸ್ಥರಿಗೆ ಸಕಾಲದಲ್ಲಿ ಸಿಗಬೇಕು. ಹಣದ ಕೊರತೆ ಎಲ್ಲಿಯೂ ಕಾಣಿಸದ ರೀತಿಯಲ್ಲಿ ಎ.ಪಿ.ಎಲ್, ಬಿ.ಪಿ.ಎಲ್ ಕುಟುಂಬದವರಿಗೂ ನಗದು ರಹಿತ ಚಿಕಿತ್ಸೆಯ ಪ್ರಯೋಜನ ಸಿಗಲಿದೆ. ರಸ್ತೆ ಅಪಘಾತದ ಸಂತ್ರಸ್ಥರಿಗೆ ಗೋಲ್ಡನ್ ಹೌಸ್ ಚಿಕಿತ್ಸೆ ನೀಡಲು ಹಸಿರು ನಿಶಾನೆ ನೀಡಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಎಬಿಎಆರ್‍ಕೆ ಜಿಲ್ಲಾ ಸಂಯೋಜಕಿ ಡಾ.ನೌಶತ್ ಬಾನು ಹಾಗೂ  ಇ-ಡಾರ್ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ವಿಜೇತ ಮಾಹಿತಿ ನೀಡಿದರು. ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಸುದರ್ಶನ್ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದೀಪಪ್ರಭು ವಂದಿಸಿದರು.






 

error: Content is protected !!
Scroll to Top