ಪಣಂಬೂರು ಬೀಚ್‌ನಲ್ಲಿ ಭಾರಿ ಕಡಲು ಕೊರೆತ: ಎರಡು ಬೃಹತ್ ಮರಗಳು ಧರೆಗುರುಳಿ, ಸ್ಥಳೀಯರಲ್ಲಿ ಆತಂಕ!

(ನ್ಯೂಸ್‌ ಕಡಬ) newskadaba.com,  ಜು.09 ಮಂಗಳೂರು: ನಗರದ ಪ್ರಸಿದ್ಧ ಪಣಂಬೂರು ಅಂತರರಾಷ್ಟ್ರೀಯ ಬೀಚ್‌ನಲ್ಲಿ ಕಳೆದ ಕೆಲವು ದಿನಗಳಿಂದ ಬೀಸುತ್ತಿರುವ ಭಾರಿ ಗಾಳಿ ಮತ್ತು ಕಡಲಬ್ಬರದ ಪರಿಣಾಮವಾಗಿ ಕಡಲು ಕೊರೆತ ಉಂಟಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಬೀಚ್‌ನ ಪ್ರಮುಖ ತಡೆಗೋಡೆ, ಕಚೇರಿ ಹಾಗೂ ಟಿಕೆಟ್ ಕೌಂಟರ್ ಸಮೀಪ ಕಡಲು ಕೊರೆತ ತೀವ್ರವಾಗಿದ್ದು, ಎರಡು ಬೃಹತ್ ಮರಗಳು ಧರೆಗುರುಳಿವೆ.ಕೋಸ್ಟ್ ಗಾರ್ಡ್ ಕಚೇರಿ ಸಮೀಪ ಹೆಚ್ಚಿನ ಹಾನಿಯಾಗದಂತೆ ತಡೆಯಲು ತಾತ್ಕಾಲಿಕವಾಗಿ ಬೃಹತ್ ಕಲ್ಲುಗಳನ್ನು ಅಳವಡಿಸಲಾಗಿದೆ.

ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದರೂ, ತೀರದಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ಸಮುದ್ರದ ಅಲೆಗಳ ತೀವ್ರತೆ ಹೆಚ್ಚಾಗಿ ಮರಳು ಸವೆತ ಉಂಟಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಳೆಗಾಲದ ಹಿನ್ನೆಲೆಯಲ್ಲಿ ಈಗಾಗಲೇ ಪ್ರವಾಸಿಗರು ಸಮುದ್ರಕ್ಕೆ ಇಳಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕಡಲಬ್ಬರ ಹೀಗೆಯೇ ಮುಂದುವರಿದರೆ ಬೀಚ್‌ನ ಸ್ವರೂಪವೇ ಬದಲಾಗುವ ಭೀತಿ ಎದುರಾಗಿದ್ದು, ಪ್ರವಾಸಿಗರ ಸುರಕ್ಷತೆ ಹಾಗೂ ಬೀಚ್ ಸಂರಕ್ಷಣೆಗಾಗಿ ಸರ್ಕಾರ ತಕ್ಷಣವೇ ಶಾಶ್ವತ ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Scroll to Top