(ನ್ಯೂಸ್ ಕಡಬ) newskadaba.com, ಜು.09: ಸುಳ್ಯತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ಕಾಡಾನೆಗಳ ಹಿಂಡು ರಾಷ್ಟ್ರೀಯ ಹೆದ್ದಾರಿ 275ನ್ನು ದಾಟಿ ಬಂದು ವ್ಯಾಪಕ ಕೃಷಿ ನಾಶ ಮಾಡಿರುವ ಘಟನೆ ನಡೆದಿದೆ.ರಾತ್ರಿ ಸುಮಾರು 10:45ರ ವೇಳೆಗೆ ಏಳು ಆನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಅದರಲ್ಲಿ ಐದು ಆನೆಗಳು ಸ್ಥಳೀಯರಾದ ಎಸ್.ಎನ್. ಮಾಸ್ಟರ್ ಅವರ ತೋಟಕ್ಕೆ ನುಗ್ಗಿ ಬೆಳೆಯನ್ನು ಸಂಪೂರ್ಣ ನಾಶಪಡಿಸಿವೆ.
ಮುಂಜಾನೆ 4 ಗಂಟೆಯ ಸುಮಾರಿಗೆ ಬಂದ ದಾರಿಯಲ್ಲೇ ವಾಪಸ್ ತೆರಳಿದ ಆನೆಗಳು, ಸರ್ಕಾರಿ ಸಾಗುವಾನಿ ನೆಡುತೋಪನ್ನು ಪ್ರವೇಶಿಸಿವೆ. ಬೆಳಿಗ್ಗೆ 7 ಗಂಟೆಯವರೆಗೂ ಆನೆಗಳ ಘೀಳಿಡುವ ಶಬ್ದ ಕೇಳಿಬರುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುಳ್ಯ ನಗರ ಬಸ್ ನಿಲ್ದಾಣದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲೇ ಕಾಡಾನೆಗಳು ಬಂದು ಕೃಷಿ ನಾಶ ಮಾಡಿರುವುದು ಸ್ಥಳೀಯ ರೈತ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.









