(ನ್ಯೂಸ್ ಕಡಬ) newskadaba.com, ಜು.07 ಕೊಡಗು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಹದ ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿದ್ದ ಆಂಧ್ರಪ್ರದೇಶದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಗಣೇಶ್ ನಾಯಕ್ (21) ಮತ್ತು ಸಂತೋಷ್ ಕುಮಾರ್ (23).ಜಲಪಾತದಲ್ಲಿ ನೀರು ಕಡಿಮೆ ಇದೆ ಎಂದು ಭಾವಿಸಿ, ಇಬ್ಬರು ವಿದ್ಯಾರ್ಥಿಗಳು ಸುರಕ್ಷತಾ ಬೇಲಿಯನ್ನು ದಾಟಿ ನೀರಿಗೆ ಇಳಿದಿದ್ದರು.
ಇದೇ ವೇಳೆ ಜಲಪಾತದ ಮೇಲ್ಭಾಗದ ವಿದ್ಯುತ್ ಉತ್ಪಾದನಾ ಘಟಕದಿಂದ ಏಕಾಏಕಿ ನೀರು ಬಿಟ್ಟಿದ್ದರಿಂದ ನೀರಿನ ಹರಿವು ತೀವ್ರಗೊಂಡಿತು. ಇದರಿಂದಾಗಿ ಇಬ್ಬರೂ ಜಲಪಾತದ ಮಧ್ಯದ ಬಂಡೆಯೊಂದನ್ನು ಹಿಡಿದುಕೊಂಡು ಸುಮಾರು ಒಂದು ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಬೇಕಾಯಿತು.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಹಗ್ಗ ಹಾಗೂ ವಿಶೇಷ ಉಪಕರಣಗಳನ್ನು ಬಳಸಿ ಸಾಹಸಮಯವಾಗಿ ಇಬ್ಬರನ್ನೂ ಸುರಕ್ಷಿತವಾಗಿ ಹೊರತಂದರು. ಸದ್ಯ ಇಬ್ಬರನ್ನೂ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ.









