(ನ್ಯೂಸ್ ಕಡಬ) newskadaba.com, ಜು.03 : ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭಿಣಿ ಮಾಡಿದ ಆರೋಪ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಬಿಜೆಪಿ ಮುಖಂಡ ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ, ಎಂಜಿನಿಯರಿಂಗ್ ವಿದ್ಯಾರ್ಥಿ ಕೃಷ್ಣ ಜೆ. ರಾವ್ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಸಂತ್ರಸ್ತೆ ಹಾಗೂ ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರತಿ ತಿಂಗಳು 75 ಸಾವಿರ ರೂಪಾಯಿ ಜೀವನಾಂಶ ಪಾವತಿಸಬೇಕು ಎಂಬ ಷರತ್ತಿನ ಮೇರೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ತಡೆಜ್ಞೆ ನೀಡಿದೆ. ಮೊದಲ ಕಂತಿನ ಹಣವನ್ನು ಮುಂದಿನ ಒಂದು ವಾರದೊಳಗೆ ಪಾವತಿಸಲು ಆದೇಶಿಸಲಾಗಿದೆ.
“ಮಗುವಿಗೆ ನೀನೇ ತಂದೆ ಎಂಬುದು ದೃಢಪಟ್ಟಿರುವಾಗ ಸಂತ್ರಸ್ತೆಯನ್ನು ಮದುವೆಯಾಗುವುದೇ ಸೂಕ್ತ. ಮದುವೆಯಾದರೆ ಮಾತ್ರ ಕ್ರಿಮಿನಲ್ ಪ್ರಕರಣವನ್ನು ಪೂರ್ಣ ರದ್ದುಪಡಿಸಲಾಗುವುದು. ಒಂದು ವೇಳೆ ಮದುವೆಯಾದ ನಂತರ ಆಕೆಯನ್ನು ತ್ಯಜಿಸಿದರೆ ಕೇಸ್ ಮತ್ತೆ ಮರುಸ್ಥಾಪನೆಯಾಗಲಿದೆ” ಎಂದು ನ್ಯಾಯಾಲಯ ಎಚ್ಚರಿಸಿದೆ.
ಮದುವೆಯ ಭರವಸೆ ನೀಡಿ ತನ್ನನ್ನು ಗರ್ಭಿಣಿಯನ್ನಾಗಿಸಿ, ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಯುವತಿ ದೂರು ನೀಡಿದ್ದರು. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದನು. ರಾಜಕೀಯ ಕಾರಣಗಳಿಗಾಗಿ ತಂದೆಯ ತೇಜೋವಧೆ ಮಾಡಲು ಈ ಕೇಸ್ ಬಳಸಲಾಗುತ್ತಿದೆ ಎಂದು ಆರೋಪಿ ಪರ ವಕೀಲರು ವಾದಿಸಿದ್ದರು…..









