(ನ್ಯೂಸ್ ಕಡಬ) newskadaba.com, ಜೂ.09 : ತಿರುವನಂತಪುರಂ: ಕೇರಳದಲ್ಲಿ ಶಿಗೆಲ್ಲಾ ಸೋಂಕು ಹರಡುತ್ತಿರುವುದು ಆತಂಕ ಮೂಡಿಸಿದ್ದು, ಆರೋಗ್ಯ ಇಲಾಖೆ ತೀವ್ರ ಮುನ್ನೆಚ್ಚರಿಕೆ ವಹಿಸಿದೆ. ಕೋಝಿಕ್ಕೋಡ್ ಜಿಲ್ಲೆಯ ನಾಲ್ಕು ವರ್ಷದ ಬಾಲಕಿಯೊಬ್ಬಳು ಈ ಸೋಂಕಿಗೆ ಬಲಿಯಾಗಿದ್ದು, ಇತರ ಇಬ್ಬರು ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ.
ವಯನಾಡಿನ ಸುಲ್ತಾನ್ ಬತ್ತೇರಿ ತಾಲೂಕು ಆಸ್ಪತ್ರೆಯಲ್ಲಿ ಸದ್ಯ 25 ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದು, ಯಾರೊಬ್ಬರ ಸ್ಥಿತಿಯೂ ಗಂಭೀರವಾಗಿಲ್ಲ. ಆರೋಗ್ಯ ಸಚಿವ ಕೆ. ಮುರಳೀಧರನ್ ಅವರು ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ಕಲುಷಿತ ನೀರು ಮತ್ತು ಅಸ್ವಚ್ಛ ಆಹಾರದಿಂದ ಹರಡುವ ಈ ಬ್ಯಾಕ್ಟೀರಿಯಾ ಸೋಂಕು ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ತೀವ್ರ ಅತಿಸಾರ, ಹೊಟ್ಟೆ ನೋವು, ಜ್ವರ ಮತ್ತು ವಾಂತಿ ಇದರ ಪ್ರಮುಖ ಲಕ್ಷಣಗಳಾಗಿವೆ.ಸೋಂಕು ಹರಡದಂತೆ ತಡೆಯಲು ಆರೋಗ್ಯ ಇಲಾಖೆ ಉನ್ನತ ಮಟ್ಟದ ಸಭೆ ಕರೆದಿದ್ದು, ರಾಜ್ಯದಾದ್ಯಂತ ಆಹಾರ ಸುರಕ್ಷತಾ ತಪಾಸಣೆಯನ್ನು ಕಠಿಣಗೊಳಿಸಿದೆ.ಕಡ್ಡಾಯವಾಗಿ ಕುದಿಸಿದ ನೀರನ್ನೇ ಕುಡಿಯಿರಿ, ಸ್ವಚ್ಛತೆಗೆ ಆದ್ಯತೆ ನೀಡಿ ಹಾಗೂ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.













