(ನ್ಯೂಸ್ ಕಡಬ) newskadaba.com ಜೂ. 08. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸಿಗದ ಕಾರಣ ತೀವ್ರ ಹೃದಯಾಘಾತದಿಂದ ಸ್ಥಳೀಯ ಉದ್ಯಮಿ ಧನಂಜಯ್ (36) ಎಂಬುವವರು ಮೃತಪಟ್ಟ ಘಟನೆ ಕೊಕ್ಕಡದಲ್ಲಿ ನಡೆದಿದೆ.
ಶುಕ್ರವಾರ ಮಧ್ಯರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಾಗ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲು ಸೂಚಿಸಿದರಾದರೂ, ಆಸ್ಪತ್ರೆಯಲ್ಲಿದ್ದ ‘108’ ಆಂಬ್ಯುಲೆನ್ಸ್ ಚಾಲಕರು ರಜೆಯಲ್ಲಿದ್ದ ಕಾರಣ ಸೇವೆ ಲಭ್ಯವಿರಲಿಲ್ಲ. ಅನಿವಾರ್ಯವಾಗಿ ಕಾರಿನಲ್ಲಿ ಕರೆದೊಯ್ಯುವಾಗ ದಾರಿಮಧ್ಯೆಯೇ ಧನಂಜಯ್ ಕೊನೆಯುಸಿರೆಳೆದಿದ್ದಾರೆ. ಸುಸಜ್ಜಿತ ಆಸ್ಪತ್ರೆಯಿದ್ದರೂ ತುರ್ತು ಸೇವೆ ಸಿಗದಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.









