(ನ್ಯೂಸ್ ಕಡಬ) newskadaba.com, ಮೇ.30: ಚಲಿಸುತ್ತಿದ್ದ ಬಸ್ಸಿನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ತಾಯಿ ಮತ್ತು ಮಗುವನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಸಿಟಿ ಬಸ್ ಚಾಲಕ ಹಾಗೂ ನಿರ್ವಾಹಕರು ಮಾನವೀಯತೆ ಮೆರೆದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅವರ ಈ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಗರದ ಮರಕಡ ಜಂಕ್ಷನ್ ಸಮೀಪ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಬಸ್ಸಿನಿಂದ ತಾಯಿ ಮತ್ತು ಮಗು ರಸ್ತೆಗೆ ಬಿದ್ದಿದ್ದರು. ಬಿದ್ದ ರಭಸಕ್ಕೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡದೆ ರಸ್ತೆಯಲ್ಲೇ ಬಿದ್ದಿದ್ದರಿಂದ ಸ್ಥಳದಲ್ಲಿದ್ದ ಜನರು ಆತಂಕಕ್ಕೊಳಗಾಗಿದ್ದರು.
ಈ ವೇಳೆ ಕಾವೂರಿನಿಂದ ಕುಂಜತ್ಬೈಲ್ ಕಡೆಗೆ ಸಂಚರಿಸುತ್ತಿದ್ದ ರೂಟ್ ನಂ. 13Bರ ‘ಮಾಸ್ಟರ್’ ಬಸ್ನ ಚಾಲಕ ದಯಾನಂದ್ ಹಾಗೂ ನಿರ್ವಾಹಕ ಸಂದೀಪ್ ತಕ್ಷಣವೇ ವಾಹನ ನಿಲ್ಲಿಸಿ ನೆರವಿಗೆ ಧಾವಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರು, ಬಸ್ಸಿನಲ್ಲಿದ್ದ ಪ್ರಯಾಣಿಕರ ಸಹಕಾರದೊಂದಿಗೆ ಗಾಯಾಳುಗಳನ್ನು ಬಸ್ಸಿನಲ್ಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ದೊರಕುವಂತೆ ಮಾಡಿದರು.
ಅಪಘಾತದ ಸಂದರ್ಭದಲ್ಲಿ ಅನೇಕರು ಕೇವಲ ವೀಕ್ಷಕರಾಗಿಯೇ ಉಳಿಯುವ ಇಂದಿನ ದಿನಗಳಲ್ಲಿ, ಬಸ್ ಸಿಬ್ಬಂದಿಯ ಈ ತ್ವರಿತ ಹಾಗೂ ಮಾನವೀಯ ಸ್ಪಂದನೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಘಟನೆಯ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಚಾಲಕ ದಯಾನಂದ್ ಮತ್ತು ನಿರ್ವಾಹಕ ಸಂದೀಪ್ ಅವರ ಸೇವಾ ಮನೋಭಾವಕ್ಕೆ ನೆಟ್ಟಿಗರು ಅಭಿನಂದನೆ ಸಲ್ಲಿಸುತ್ತಿದ್ದಾರೆ.









