(ನ್ಯೂಸ್ ಕಡಬ) newskadaba.com, ಮಾ.02: ದಕ್ಷಿಣ ಕನ್ನಡ ಜಿಲ್ಲೆಯ ಕಬಕ–ಪುತ್ತೂರು ರೈಲು ನಿಲ್ದಾಣದ ಅಭಿವೃದ್ಧಿಗೆ ಮಹತ್ವದ ಉತ್ತೇಜನ ಸಿಕ್ಕಿದ್ದು, ಪ್ರಯಾಣಿಕರಿಗೆ ಉತ್ತಮ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ₹2.91 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗೆ ಅನುಮೋದನೆ ದೊರೆತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ
ಈ ಯೋಜನೆಯಡಿ ಕಬಕ–ಪುತ್ತೂರು ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 1ರಲ್ಲಿ ವಿಶಾಲವಾದ ಮತ್ತು ಆಧುನಿಕ ಶೆಲ್ಟರ್ ನಿರ್ಮಾಣವಾಗಲಿದೆ. ಪ್ರಸ್ತುತ ನಿಲ್ದಾಣದಲ್ಲಿ ಕೇವಲ 531 ಚದರ ಮೀಟರ್ ವಿಸ್ತೀರ್ಣದ ಶೆಲ್ಟರ್ ಮಾತ್ರ ಲಭ್ಯವಿದ್ದು, ಇದು ಪ್ರಯಾಣಿಕರ ಅಗತ್ಯಗಳಿಗೆ ತೀರಾ ಸಹಾಯಕವಾಗಲಿದೆ. ಆದರೆ, ಹೊಸ ಯೋಜನೆಯಡಿ 3,392 ಚದರ ಮೀಟರ್ ವಿಸ್ತೀರ್ಣದ ಬೃಹತ್ ಶೆಲ್ಟರ್ ನಿರ್ಮಾಣವಾಗಲಿದ್ದು, ಇದು ಪ್ರಯಾಣಿಕರಿಗೆ ಮಳೆಗಾಲ ಮತ್ತು ಬೇಸಿಗೆಯಂತಹ ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ದೊಡ್ಡ ಮಟ್ಟದ ಅನುಕೂಲ ಒದಗಿಸಲಿದೆ.
ಶೆಲ್ಟರ್ ನಿರ್ಮಾಣಕ್ಕಾಗಿ ಅಗತ್ಯ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದರು ತಿಳಿಸಿದ್ದಾರೆ. ಈ ಯೋಜನೆ ಪೂರ್ಣಗೊಂಡ ನಂತರ ನಿಲ್ದಾಣದಲ್ಲಿ ಪ್ರಯಾಣಿಕರ ಅನುಭವವು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ.









