(ನ್ಯೂಸ್ ಕಡಬ) newskadaba.com, ಆ.27: ಜಮ್ಮು–ಕಾಶ್ಮೀರದ ವೈಷ್ಣೋದೇವಿ ಯಾತ್ರೆ ಮಾರ್ಗದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಹತ್ತಾರು ಮಂದಿ ಸಿಲುಕಿದ್ದರು. ನಿರಂತರ ಮಳೆಯ ಪರಿಣಾಮ ಜಮ್ಮು–ಕಾಶ್ಮೀರದ ಇತರ ಪ್ರದೇಶಗಳಲ್ಲಿಯೂ ಹಾನಿ ಸಂಭವಿಸಿದೆ.
ಸದ್ಯ ವೈಷ್ಣೋದೇವಿ ಯಾತ್ರೆ ಸ್ಥಗಿತಗೊಳಿಸಲಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಜಮ್ಮು–ಕಾಶ್ಮೀರದಲ್ಲಿ 22 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತುರ್ತು ಸಭೆ ಕರೆದು, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಆಹಾರ, ನೀರು ಹಾಗೂ ಔಷಧಿಗಳನ್ನು ಪೂರೈಸುವಂತೆ ನಿರ್ದೇಶಿಸಿದ್ದಾರೆ.
ಕಥುವಾದಲ್ಲಿ 24 ಗಂಟೆಯಲ್ಲಿ ಅತೀ ಹೆಚ್ಚು 155.6 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.









