(ನ್ಯೂಸ್ ಕಡಬ) newskadaba.com, ಆ.15: ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು 79ನೇ ಸ್ವಾತಂತ್ರ್ಯ ದಿನೋತ್ಸವದ ನಿಮಿತ್ತ ನವದೆಹಲಿಯ ಗೃಹ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, 79ನೇ ಸ್ವಾತಂತ್ರ್ಯ ದಿನಾಚರಣೆಯ ಈ ಪವಿತ್ರವಾದ ದಿನದಂಸು ಮಾತೃಭೂಮಿ ವಿವೇಚನೆಗಾಗಿ ಸೆರೆವಾಸ, ಗಲ್ಲುಶಿಕ್ಷೆ ಸೇರಿದಂತೆ ಅನೇಕ ಘೋರ ಶಿಕ್ಷೆಗಳನ್ನು ಎದುರಿಸಿ ಸ್ವತಂತ್ರ ಭಾರತಕ್ಕಾಗಿ ಹೋರಾಡಿ, ಮಡಿದ ಅಸಂಖ್ಯಾತ ಮಹಾ ಮಹಿಮರನ್ನು ಸ್ಮರಿಸಿದಾಗ ನನ್ನ ಹೃದಯವು ಹೆಮ್ಮೆಯಿಂದ ತುಂಬಿ ಬರುತ್ತಿದೆ ಎಂದರು.
ಇಂದು ನಾವೆಲ್ಲರೂ ನಮ್ಮದೇ ಆಗಿರುವ ಸಾರ್ವಭೌಮ, ಪ್ರಜಾಪ್ರಭುತ್ವ ಹಾಗೂ ಚೈತನ್ಯಶೀಲ ರಾಷ್ಟ್ರದಲ್ಲಿದ್ದೇವೆ. ಇದು ಕೇವಲ ಆಚರಣೆಯ ದಿನವಲ್ಲ. ತಾಯ್ನಾಡು ಗಳಿಸಿದ ಮಹೋನ್ನತ ಸ್ವಾತಂತ್ರ್ಯವನ್ನು ರಕ್ಷಣೆ ಮಾಡುವ ಹಾಗೂ ಸಂರಕ್ಷಿಸುವ ನಮ್ಮ ಬದ್ದತೆ, ಪ್ರತಿಜ್ಞೆಯನ್ನು ಪುನರುಚ್ಚರಿಸುವ ದಿನವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಬೃಹತ್ ಆರ್ಥಿಕ ಶಕ್ತಿಯಾಗಿ ಅವತರಿಸುತ್ತಿದೆ. ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವನಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಲಿಷ್ಠ, ಶ್ರೇಷ್ಠ ಮತ್ತು ವಿಕಸಿತ ಭಾರತ ನಿರ್ಮಾಣಕ್ಕಾಗಿ ನಾನು ಕಟಿ ಬದ್ದನಾಗಿದ್ದೇನೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಏಕತೆ, ಶಕ್ತಿ ಹಾಗೂ ಅಚಲ ದೇಶಭಕ್ತಿಯ ಸಂಕೇತವಾಗಿ ಹೆಮ್ಮೆಯ ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸೋಣ. ಭಾರತಾಂಬೆಗೆ ಶ್ರದ್ಧೆ, ಭಕ್ತಿಯಿಂದ ನಮಿಸೋಣ ಎಂದು ತಿಳಿಸಿದರು.










