(ನ್ಯೂಸ್ ಕಡಬ) newskadaba.com, ಜು. 30. ಧರ್ಮಸ್ಥಳ ಹಾಗೂ ಸುತ್ತಮುತ್ತ ಅನಾಮಧೇಯ ವ್ಯಕ್ತಿ ಹೇಳಲಾದ ಸ್ಥಳಗಳಲ್ಲಿ ಶವಗಳ ಕಳೆಬರಹಗಳನ್ನು ಹುಡುಕುವ ಕಾರ್ಯಾಚರಣೆ ಎರಡನೇ ದಿನವಾದ ಇಂದೂ ಮುಂದುವರೆದಿದ್ದು, ಹಳೆಯ ಗುಂಡಿಯ ಜೊತೆಗೆ ಹೊಸದಾಗಿ ಇನ್ನೆರೆಡು ಸ್ಥಳಗಳಲ್ಲೂ ಉತ್ಖನನ ಆರಂಭವಾಗಿದೆ.
ಅನಾಮಿಕ ವ್ಯಕ್ತಿ ತೋರಿಸಿರುವ 13 ಸ್ಥಳಗಳ ಪೈಕಿ ನಿನ್ನೆ ಧರ್ಮಸ್ಥಳದ ಸ್ನಾನಘಟ್ಟ ಸಮೀಪದ ಅರಣ್ಯ ಪ್ರದೇಶದಲ್ಲಿ ದಿನವಿಡೀ ಉತ್ಖನನ ನಡೆಸಲಾಯಿತು.ಆರಂಭದಲ್ಲಿ ಹಾರೆ, ಗುದ್ದಲಿ, ಪಿಕಾಸಿ, ಸಲಿಕೆ ಬಳಸಿ ಕೂಲಿಕಾರ್ಮಿಕರಿಂದ ಶಂಕಿತ ಗುಂಡಿಯನ್ನು 8 ಅಡಿ ಆಳ, 15 ಅಡಿ ಸುತ್ತಳತೆಯ ಉತ್ಖನನ ನಡೆಸಲಾಯಿತು. ಏನೂ ಸಿಗದೇ ಇದ್ದಾಗ ಜೆಸಿಬಿಯನ್ನು ಬಳಸಿ ಗುಂಡಿ ಅಗೆಯುವ ಕೆಲಸ ಮುಂದುವರೆದಿತ್ತು. ಸುರಿವ ಮಳೆಯ ನಡುವೆಯೇ ನಡೆದ ಕಾರ್ಯಾಚರಣೆಯಲ್ಲಿ ಮಣ್ಣು ಹೊರತುಪಡಿಸಿ ಉಳಿದ ಯಾವುದೇ ಪಳಯುಳಿಕೆ ಸಿಗಲಿಲ್ಲ. ಹೀಗಾಗಿ ಸಂಜೆಯ ವೇಳೆಗೆ ಕಾರ್ಯಾಚರಣೆಗೆ ತಾತ್ಕಾಲಿಕ ಬಿಡುವು ನೀಡಲಾಯಿತು.









