(ನ್ಯೂಸ್ ಕಡಬ) newskadaba.com, ಜು. 29. ರಸಗೊಬ್ಬರದ ಕೊರತೆ ವಿಚಾರದಲ್ಲಿ ಬಿಜೆಪಿಯವರ ಪ್ರತಿಭಟನೆ ಕೇಂದ್ರ ಸರ್ಕಾರದ ಕೃಷಿ ಸಚಿವರು ಹಾಗೂ ರಸಗೊಬ್ಬರಗಳ ಸಚಿವರ ವಿರುದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ, ವ್ಯವಸಾಯದ ಭೂಮಿ ವಿಸ್ತರಣೆಯಾಗಿದೆ, ರೈತರಿಗೆ ಒಳ್ಳೆಯದಾಗುತ್ತಿದೆ. ಇದು ಸ್ವಾಗತಾರ್ಹ ಎಂದರು.
ಬಿಜೆಪಿಗರು ಯಾವ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ?, ರಸಗೊಬ್ಬರ ನಮ ಬಳಿ ಇಲ್ಲ. ಕೇಂದ್ರ ಸರ್ಕಾರ ಕೊಡಬೇಕು ನಾವು ಹಂಚಿಕೆ ಮಾಡಬೇಕು. ಹಂಚಿಕೆಯಲ್ಲಿ ಯಾವುದಾದರೂ ಲೋಪಗಳಾಗಿದ್ದರೆ ಅದರ ಪರಿಶೀಲನೆ ಮಾಡಲಿ. ಯಾವ ಸೊಸೈಟಿಗೆ ಎಷ್ಟು ಗೊಬ್ಬರ ಹೋಗಿದೆ, ಎಷ್ಟು ಹಂಚಿಕೆಯಾಗಿದೆ, ಯಾವ ಜಿಲ್ಲೆಗೆ ಬಂದಿರುವುದೆಷ್ಟು, ಉಳಿದಿರುವುದೆಷ್ಟು…. ಎಲ್ಲವೂ ಕರಾರುವಕ್ಕಾದ ಲೆಕ್ಕಪತ್ರಗಳಿವೆ ಎಂದು ಹೇಳಿದರು. ಈ ಹಿಂದೆ ಗೊಬ್ಬರ ಕೊಡಲಾಗದೆ ಬಿಜೆಪಿ ಸರ್ಕಾರ ರೈತರ ಮೇಲೆ ಗೋಲಿಬಾರ್ ನಡೆಸಿತ್ತು. ನಾವು ಆ ರೀತಿ ಯಾವುದನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.









