(ನ್ಯೂಸ್ ಕಡಬ) newskadaba.com ಕಡಬ, ಜು. 07. ಶ್ರೀ ಭಾರತಿ ಶಿಶುಮಂದಿರ ವಿದ್ಯಾಲಯದಲ್ಲಿ ಪುಟಾಣಿಗಳ ಪ್ರವೇಶೋತ್ಸವ ಮತ್ತು ಪಾಲಕರ ಸಭೆಯು ಶುಕ್ರವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಕಲ್ಯಾಣಿ ಕನ್ಸಲ್ಟೆನ್ಸಿ ಕಡಬ ಇದರ ಮಾಲಕರಾದ ಶ್ರೀ ಮನಮೋಹನ್ ರೈ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.) ಹೊಸಮಠ ಇದರ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ದೇವಾಡಿಗ ಅನಿಲ ಇವರು ಅಗ್ನಿಕುಂಡಕ್ಕೆ ಘೃತಾಹುತಿ ಮಾಡುವುದರ ಮೂಲಕ ಪ್ರವೇಶೋತ್ಸವಕ್ಕೆ ಚಾಲನೆ ನೀಡಿದರು.
ಸಂಸ್ಕಾರಯುತ ಶಿಕ್ಷಣವನ್ನು ಚಟುವಟಿಕೆ ಆಧಾರಿತವಾಗಿ ನೀಡುವ ಮೂಲಕ ಸಮಾಜದ ಆದರ್ಶ ವ್ಯಕ್ತಿಯನ್ನಾಗಿ ರೂಪಿಸುವ ಪ್ರಯತ್ನ ಶ್ರೀ ಭಾರತೀ ಶಿಶು ಮಂದಿರದ ವತಿಯಿಂದ ನಡೆಸಲಾಗುತ್ತದೆ ಎಂದು ಸರಸ್ವತಿ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರವಿರಾಜ್ ಶೆಟ್ಟಿ ಕಡಬ ಹೇಳಿದರು. ಪುಟಾಣಿಗಳು ಪಾಲಕರೊಂದಿಗೆ ಹೋಮಕುಂಡಕ್ಕೆ ಹವಿಸ್ಸು ಸಮರ್ಪಣೆ ಮಾಡಿ ಅತಿಥಿಗಳಿಂದ ಆಶೀರ್ವಾದ ಪಡೆದು, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿದರು. ನಂತರ ಪಾಲಕರ ಸಭೆಯಲ್ಲಿ ಪಠ್ಯಪುಸ್ತಕ ಹಾಗೂ ಮಕ್ಕಳ ದೈನಂದಿನ ವಿಚಾರಗಳ ಕುರಿತು ಚರ್ಚಿಸಲಾಯಿತು.
ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಸವಿತಾ ಶಿವಸುಬ್ರಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಜಗನ್ನಾಥ ಶೆಟ್ಟಿ ಬಲ್ಯ ಹಾಗೂ ಆಡಳಿತ ಮಂಡಳಿ ಸದಸ್ಯೆ ಉಪಸ್ಥಿತರಿದ್ದರು. ಕುಮಾರಿ ಮಹಾದೇವಿ ಸ್ವಾಗತಿಸಿ ಶ್ರೀಮತಿ ವಿದ್ಯಾ ವಂದಿಸಿದರು. ಶಿಶುಮಂದಿರದ ಮುಖ್ಯ ಮಾತಾಜಿ ಕುಮಾರಿ ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.









