(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 13. ಕಳೆದ ವರ್ಷ ಭೀಕರ ಭೂಕುಸಿತ ಸಂಭವಿಸಿ 400ಕ್ಕೂ ಹೆಚ್ಚು ಜನರು ಮೃತಪಟ್ಟ ಕೇರಳದ ವಯನಾಡು ಜಿಲ್ಲೆಯಲ್ಲಿ ಎಕ್ಸ್-ಬ್ಯಾಂಡ್ ರಾಡಾರ್ ಸ್ಥಾಪಿಸಲು ಭಾರತೀಯ ಹವಾಮಾನ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಮ್ಮುಖದಲ್ಲಿ ವಯನಾಡಿನ ಪುಲ್ಪಳ್ಳಿಯಲ್ಲಿರುವ ಪಳಸ್ಸಿರಾಜ ಕಾಲೇಜಿನಲ್ಲಿ ಎಕ್ಸ್-ಬ್ಯಾಂಡ್ ರಾಡಾರ್ ಅಳವಡಿಸಲು ಐಎಂಡಿ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ತಿಳಿದುಬಂದಿದೆ.
100 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಎಕ್ಸ್-ಬ್ಯಾಂಡ್ ರಾಡಾರ್, ವಿಪತ್ತು ಪೀಡಿತ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹವಾಮಾನ ವೀಕ್ಷಣಾ ಮೂಲಸೌಕರ್ಯಕ್ಕೆ ನಿರ್ಣಾಯಕ ಸೇರ್ಪಡೆಯಾಗಿದೆ ಎಂದು ಐಎಂಡಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ. ಈ ಅತ್ಯಾಧುನಿಕ ವ್ಯವಸ್ಥೆಯು ಹವಾಮಾನ ಮುನ್ಸೂಚನೆಯ ನಿಖರತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಹವಾಮಾನ ವೈಪರೀತ್ಯಗಳ ಕುರಿತಂತೆ ಹೆಚ್ಚು ಸಮಯೋಚಿತ ಮತ್ತು ನಿಖರವಾದ ಮುನ್ಸೂಚನೆಯನ್ನು ನೀಡುತ್ತದೆ. ಈ ಪ್ರದೇಶದಲ್ಲಿ ವಿಪತ್ತು ಸಿದ್ಧತೆ ಮತ್ತು ಪ್ರತಿಕ್ರಿಯೆ ಪ್ರಯತ್ನಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ ಎಂದು ಐಎಂಡಿ ಪೋಸ್ಟ್ನಲ್ಲಿ ಹೇಳಿದೆ.