(ನ್ಯೂಸ್ ಕಡಬ) newskadaba.com ಜೂ. 10. ದೆಹಲಿಯನ್ನು ಸಂಚಾರದಟ್ಟಣೆ ಮತ್ತು ಮಾಲಿನ್ಯದ ಸಮಸ್ಯೆಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 25 ಹಸಿರು ಎಕ್ಸ್ ಪ್ರೆಸ್ ಹೆದ್ದಾರಿಗಳ ನಿರ್ಮಾಣಕ್ಕೆ ಮುಂದಾಗಿದ್ದು, ಇದು ಭಾರತದ ಸಂಪೂರ್ಣ ನಕ್ಷೆಯನ್ನು ಬದಲಾಯಿಸುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಂಚಾರ ದಟ್ಟಣೆ ಮತ್ತು ಮಾಲಿನ್ಯದ ಸಮಸ್ಯೆಗಳಿಂದ ಮುಕ್ತಗೊಳಿಸಲು ಕೇಂದ್ರ ಸರ್ಕಾರವು 1.5 ಲಕ್ಷ ಕೋಟಿ ರೂ.ಗಳ ರಸ್ತೆಗಳನ್ನು ನಿರ್ಮಿಸುತ್ತಿದೆ. ಇದರಿಂದ ನಾವು ದೆಹಲಿಯಿಂದ ಡೆಹ್ರಾಡೂನ್ಗೆ 2 ಗಂಟೆಗಳಲ್ಲಿ, ದೆಹಲಿಯಿಂದ ಅಮೃತಸರಕ್ಕೆ 3.5-4 ಗಂಟೆಗಳಲ್ಲಿ, ದೆಹಲಿಯಿಂದ ಕತ್ರಾಗೆ 6 ಗಂಟೆಗಳಲ್ಲಿ, ದೆಹಲಿಯಿಂದ ಶ್ರೀನಗರಕ್ಕೆ 8 ಗಂಟೆಗಳಲ್ಲಿ, ದೆಹಲಿಯಿಂದ ಜೈಪುರಕ್ಕೆ 2 ಗಂಟೆಗಳಲ್ಲಿ, ಚೆನ್ನೈನಿಂದ ಬೆಂಗಳೂರಿಗೆ 2 ಗಂಟೆಗಳಲ್ಲಿ, ಬೆಂಗಳೂರಿನಿಂದ ಮೈಸೂರಿಗೆ 1 ಗಂಟೆಯಲ್ಲಿ, ಮೀರತ್ನಿಂದ ದೆಹಲಿಗೆ 50 ನಿಮಿಷಗಳಲ್ಲಿ ತಲುಪುತ್ತೇವೆ. ನಾವು ಈ ರೀತಿಯ ಸುಮಾರು 25 ಹಸಿರು ಎಕ್ಸ್ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದೇವೆ ಎಂದರು.









