ಬಂಟ್ವಾಳ: ಪ್ರೀತಿಗೆ ಅಡ್ಡ ಬರುತ್ತಿದ್ದಾನೆ ಎಂದು ತನ್ನ ಸ್ನೇಹಿತನ ಕೊಲೆ ► ಕಬಡ್ಡಿಗೆ ತೆರಳುವ ನೆಪದಲ್ಲಿ ನೀರಿಗೆ ದೂಡಿ ಹಾಕಿದ ಭೂಪ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.29. ಹುಡುಗಿಯ ವಿಚಾರದಲ್ಲಿ ಅಡ್ಡ ಬರುತ್ತಿದ್ದಾನೆಂಬ ಕಾರಣಕ್ಕಾಗಿ ತನ್ನ ಸ್ನೇಹಿತನನ್ನೇ ನೀರಿಗೆ ತಳ್ಳಿ ಕೊಲೆಗೈದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಮೃತ ಯುವಕನನ್ನು ನರಿಕೊಂಬು ಗ್ರಾಮದ ನಾರಾಯಣ ಎಂಬವರ ಪುತ್ರ ಯತೀಶ್ ಎಂದು ಗುರುತಿಸಲಾಗಿದೆ. ಯತೀಶ್ ನ ಸ್ನೇಹಿತ ಶಶಿಧರ್ ಬೆಳ್ತಂಗಡಿಯ ಯುವತಿಯೋರ್ವಳನ್ನು ಪ್ರೀತಿಸುವ ವಿಚಾರದಲ್ಲಿ ಸಣ್ಣಪುಟ್ಟ ಗಲಾಟೆ ನಡೆದಿದೆಯೆನ್ನಲಾಗಿದೆ. ತನ್ನ ಪ್ರೀತಿಗೆ ಸ್ನೇಹಿತ ಯತೀಶ್ ಅಡ್ಡಬರುತ್ತಿದ್ದು, ಆತನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಶಶಿಧರ್ ತನ್ನ ಸ್ನೇಹಿತರಲ್ಲಿ ಹೇಳುತ್ತಿದ್ದನೆನ್ನಲಾಗಿದೆ. ಮಾರ್ಚ್ 24 ರಂದು ಯತೀಶನನ್ನು ಕೊಲೆ ಮಾಡುವ ಉದ್ದೇಶದಿಂದ ನಿನ್ನಿಪಡ್ಪು ಎಂಬಲ್ಲಿಗೆ ಕಬಡ್ಡಿ ನೋಡಲೆಂದು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ ನೀರಿಗೆ ದೂಡಿ ಹಾಕಿ‌ ಕೊಲೆ ಮಾಡಿದ್ದಾನೆನ್ನಲಾಗಿದೆ. ಮಾರ್ಚ್ 27 ರಂದು ಯತೀಶ ಮೃತದೇಹ ನದಿಯಲ್ಲಿ ದೊರೆತಿದ್ದು, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಪೊಲೀಸರು ಆರೋಪಿ ಶಶಿಧರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Scroll to Top