ಮಾಣಿ: ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಆಚರಣೆ – ಹಿಂದೂ ಬಾಂಧವರಿಂದ ತಂಪು ಪಾನೀಯ ನೀಡಿ ಶುಭಹಾರೈಕೆ

(ನ್ಯೂಸ್ ಕಡಬ) newskadaba.com ಮಾಣಿ, ಸೆ. 29. ಇಲ್ಲಿನ ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯಲ್ಲಿ ಲೋಕ ಪ್ರವಾದಿ ಹಝ್ರತ್ ಮುಹಮ್ಮದ್ ಮುಸ್ತಫಾ (ಸ.ಅ)ರವರ ಜನ್ಮದಿನಾಚರಣೆ ಪ್ರಯುಕ್ತ ಮೀಲಾದುನ್ನಬಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಎರಡು ದಿನಗಳ ಮದ್ರಸಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಮತ ಪ್ರಭಾಷಣ, ಬುರ್ದಾ ಮಜ್ಲಿಸ್, ಮೌಲಿದ್ ಮತ್ತು ಆಕರ್ಷಕ ಮೀಲಾದ್ ರ‌್ಯಾಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಸೀದಿ ಖತೀಬರಾದ ಹನೀಫ್ ಸ‌ಅದಿ ಕುಂತೂರು, ಸದರ್ ಇಬ್ರಾಹಿಂ ರಝಾ ಅಲ್ ಫುರ್ಖಾನಿ ವಿಟ್ಲ, ಅಧ್ಯಾಪಕರಾದ ನವಾಝ್ ಹನೀಫಿ ಅಲ್ ಅಶ್‌ಹರಿ ನೂಜಿ, ಅಧ್ಯಕ್ಷ ಹಾಜಿ ಅಬ್ದುಲ್‌ ಹಮೀದ್ ಸೂರಿಕುಮೇರು, ಕಾರ್ಯದರ್ಶಿ ಅಮೀರುದ್ದೀನ್, ಕೋಶಾಧಿಕಾರಿ ಯೂಸುಫ್ ಹಾಜಿ, ಉಪಾಧ್ಯಕ್ಷ ಹಂಝ ಸೂರಿಕುಮೇರು, ಜೊತೆ ಕಾರ್ಯದರ್ಶಿ ಅಬ್ದುಲ್ ಕರೀಂ ಸೂರಿಕುಮೇರು, ಸಹಿತ ಹಲವಾರು ಉಲಮಾ ಉಮರಾ ನೇತಾರರು, ಜಮಾ‌ಅತ್ ಕಮಿಟಿ ಸದಸ್ಯರು, ಬದ್ರಿಯಾ ಯಂಗ್‌ಮೆನ್ಸ್ ಭಾಗವಹಿಸಿದ್ದರು.

ಮೌಲಿದ್ ಕಾರ್ಯಕ್ರಮದಲ್ಲಿ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಮಾತನಾಡಿ, ಇಂದು ಲೋಕವೇ ಸಂಭ್ರಮಿಸುವ ದಿವಸ, ಮುಸಲ್ಮಾನರಿಗೆ ಇಂದು ಹಬ್ಬವಾಗಿದೆ ಎಂದು ಹೇಳುತ್ತಾ ಜನರೇ ಮರಣ ಬೆನ್ನ ಹಿಂದೆ ಇದೆ ಅಹಂಕಾರಿಗಳಾಗಿ ಜೀವಿಸಬೇಡಿ, ಒಂದು ಜ್ವರವೋ ಬೇಧಿಯೋ ಬಂದರೆ ಎದ್ದು ನಿಲ್ಲಲು ಇನ್ನೊಬ್ಬರ ಸಹಾಯ ನಮಗೆ ಬೇಕು ಎಂಬುವುದನ್ನು ಮರೆಯದಿರಿ ಎಂದು ಉಪದೇಶಿಸಿ ದುಆ ಗೈದರು. ಮೀಲಾದ್ ರ‌್ಯಾಲಿಗೆ ಸೂರಿಕುಮೇರು ಜಂಕ್ಷನ್ ಬಳಿ ಹಿಂದೂ ಸಹೋದರರು ಕೂಡಾ ತಂಪು ಪಾನೀಯಗಳನ್ನು ನೀಡಿ ಶುಭಹಾರೈಸಿದರು.

error: Content is protected !!

Join the Group

Join WhatsApp Group