ವಿದ್ಯುತ್ ಕಂಬಕ್ಕೆ ಆಟೋ ರಿಕ್ಷಾ ಢಿಕ್ಕಿ – ಯುವತಿ ಮೃತ್ಯು

(ನ್ಯೂಸ್ ಕಡಬ) newskadaba.com ಬಜಪೆ, ಸೆ. 18. ಚಾಲಕನ ನಿಯಂತ್ರಣ ತಪ್ಪಿದ ಆಟೋ ರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಯುವತಿಯೋರ್ವಳು ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡ ಘಟನೆ ಗುರುಪುರ-ಬಂಗ್ಲೆಗುಡ್ಡೆ ಅಣೆಬಳಿಯ ಒಳ ರಸ್ತೆಯಲ್ಲಿ ನಡೆದಿದೆ.

ಮೃತ ಯುವತಿಯನ್ನು ಅರ್ಕುಳ ತುಪ್ಪೆಕಲ್ಲು ನಿವಾಸಿ ಪ್ರೀತಿ ಸಪಲಿಗ (25) ಎಂದು ಗುರುತಿಸಲಾಗಿದೆ. ಪ್ರೀತಿಯವರ ತಾಯಿ ಮೀನಾಕ್ಷಿ (55), ತಂಗಿ ಸ್ವಾತಿ (23), ಅತ್ತಿಗೆ ಶೋಭಾ(37), ಶೋಭಾ ಅವರ ಪುತ್ರ ಭವಿಷ್‌ (9) ಹಾಗೂ ಆಟೋ ಚಾಲಕ ಪದ್ಮನಾಭ ಎಂದು ಗಾಯಗೊಂಡವರು. ಇವರ ಪೈಕಿ ಮೀನಾಕ್ಷಿ ಅವರ ಸ್ಥಿತಿ ಗಂಭೀರವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರ್ಕುಳ ತುಪ್ಪೆಕಲ್ಲಿನ ಕುಟುಂಬವೊಂದು ಆಟೋ ರಿಕ್ಷಾ ಮೂಲಕ ಆದ್ಯಪಾಡಿ ದೇವಸ್ಥಾನಕ್ಕೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಗುರುಪುರ ಬಂಗ್ಲೆಗುಡ್ಡೆ ಇಳಿಜಾರು ರಸ್ತೆಯಾಗಿ ಅಣೆಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಪ್ರಕರಣ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top